ಬಳ್ಳಾರಿ: ಅಕಾಲಿಕ ಮಳೆ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತ ಜೊತೆಗೆ ರೈತರ ನಾನಾ ಬೆಳೆಗಳು ಹಾನಿಗೀಡಾಗಿವೆ.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು, ಭಾನುವಾರ ತಾಲೂಕಿನ ಕಪಗಲ್ಲು, ಬಿ.ಡಿ.ಹಳ್ಳಿ, ಯರ್ರಗುಡಿ, ಸಿರಿಗೇರಿ ಕ್ರಾಸ್ ಸೇರಿದಂತೆ ನಾನಾ ಕಡೆ ಭೇಟಿ ನೀಡಿ ಪರಿಶೀಲಿಸಿದರು.
ಅಕಾಲಿಕವಾಗಿ ಸುರಿದ ಮಳೆಯಿಂದ ಉಂಟಾದ ಭತ್ತ, ಮೆಣಸಿನಕಾಯಿ ಹಾಗೂ ಸೇರಿದಂತೆ ಇತರೇ ಬೆಳೆ ಹಾನಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಈಗಾಗಲೇ ಜಂಟಿ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಾನಿಗೀಡಾದ ಎಲ್ಲ ಬೆಳೆಗಳಿಗೂ ಪರಿಹಾರ ದೊರೆಯಲಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗಬೇಡಿ, ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರವಿದೆ ಎಂದು ತಿಳಿಸಿದರು.
ಹತ್ತಿ, ಮೆಣಸಿನಕಾಯಿ ಸೇರಿದಂತೆ ನಾನಾ ಬೆಳೆಗಳು ಹಾನಿಗೀಡಾದ ಸ್ಥಳಕ್ಕೆ ತೆರಳಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ, ರೈತರೊಂದಿಗೆ ಚೆರ್ಚಿಸಿದರು.
ಈ ಸಂದರ್ಭದಲ್ಲಿ ರೈತರು ಮಳೆಯಿಂದ ಉಂಟಾದ ಅಪಾರ ಪ್ರಮಾಣದ ಮೆಣಸಿನಕಾಯಿ, ಭತ್ತದ ಬೆಳೆಗಳು ಹಾನಿಯಾಗಿದ್ದು, ಕಣ್ಣೀರು ತರಿಸಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಆರಂಭಿಸಲಾಗಿದ್ದು, ಹಾನಿಗೊಳಗಾದ ಬೆಳೆಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು, ಆತಂಕಬೇಡ ಎಂದು ಜಿಲ್ಲಾಧಿಕಾರಿಗಳು ರೈತರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ತಹಸೀಲ್ದಾರ್ ರೆಹಮಾನ್ಪಾಶಾ, ತೋಟಗಾರಿಕೆ, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಇತರರು ಉಪಸ್ಥಿತದ್ದರು.