ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ಬರುವ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಜಂಬೂ ಸವಾರಿಯ ಮೂಲಕ ನಾಡ ಹಬ್ಬ ದಸರಾವನ್ನು ವೈಭವದಿಂದ ಆಚರಿಸುವುದಾಗಿ ರಾಜ್ಯ ಬಿಜೆಪಿ ಯುವ ಮುಖಂಡ ಭೀಮಾಶಂಕರ ಪಾಟೀಲ್ ಹೇಳಿದರು.
ತಾಲೂಕಿನ ನಿಂಬಾಳ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ತುಳಜಾ ಭವಾನಿ ತರುಣ ಸಂಘದಿಂದ ಆಯೋಜಿಸಲಾಗಿದ್ದ ದುರ್ಗಾ ಪುರಾಣದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗಡಿ ಊರು ನಿಂಬಾಳ ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ಚಳುವಳಿಗೆ ತನ್ನದೇ ಆದ ಕೊಡುಗೆ ನೀಡಿದ ಗ್ರಾಮವಾಗಿದೆ..ಈ ಊರಿನ ಹಲವು ಮನೆತನಗಳು ರಜಾಕಾರ ವಿರುದ್ಧ ಹೋರಾಟ ಮಾಡುತ್ತಿದ್ದ ದುಧನಿ ಕ್ಯಾಂಪ್ ನ ಕ್ರಾಂತಿಕಾರಿಗಳಿಗೆ ಊಟ,ವಸತಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿ ಕ್ರಾಂತಿ ಕಾರಿ ಹೋರಾಟಗಾರರಿಗೆ ಶಕ್ತಿ ತುಂಬುವ ಕೆಲಸ ಮಾಡಿವೆ ಎಂದರು.
ರಜಾಕರ ಕ್ರೂರ ಸೈನ್ಯದಿಂದ ಹಲವಾರು ಕ್ರಾಂತಿಕಾರಿಗಳನ್ನು ರಕ್ಷಣೆ ಮಾಡಿದ ಕೀರ್ತಿ ನಿಂಬಾಳ ಗ್ರಾಮಕ್ಕೆ ಸಲ್ಲುತ್ತದೆ.ನಿಂಬಾಳ ಗ್ರಾಮದ ಇತಿಹಾಸ ಹಿರಿಮೆಯನ್ನು ಇಂದಿನ ಯುವ ಪೀಳಿಗೆಗೆ ನೆನಪಿಸುವ ಸಲುವಾಗಿ ನಿಜಾಮ್ ನಂಥಹ ದುಷ್ಟರನ್ನು ಶಿಕ್ಷಿಸಿ,ಅವನ ವಿರುದ್ಧ ಹೋರಾಟ ಮಾಡಿದ ಶಿಷ್ಟರನ್ನು ರಕ್ಷಿಸಿದ ಸವಿ ನೆನಪಿಗಾಗಿ ಮುಂದಿನ ವರ್ಷ ನಿಂಬಾಳ ಗ್ರಾಮದಲ್ಲಿ ಆನೆಯ ಮೇಲೆ ದುರ್ಗಾ ಮಾತೆಯ ಪ್ರತಿಮೆ ಮೆರವಣಿಗೆ ಮಾಡಿ ಮೈಸೂರು ದಸರಾ ಮಾದರಿಯಲ್ಲಿ ಜಂಬೂ ಸವಾರಿ ಉತ್ಸವ ಆಚರಿಸುವುದಾಗಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾದನಹಿಪ್ಪರಗಿಯ ವಿರಕ್ತಮಠದ ಪೀಠಾಧ್ಯಕ್ಷರಾದ ಶ್ರೀ ಮನಿಪ್ರ ಅಭಿನವ ಶಿವಲಿಂಗ ಮಹಾಸ್ವಾಮಿಜೀಗಳು ವಹಿಸಿದ್ದರು. ಗ್ರಾಮದ ಮುಖಂಡರಾದ ಚಂದ್ರಕಾಂತ ಗದ್ದೆ, ಪರಮೇಶ್ವರ ನಂದೇಣಿ, ಗ್ರಾಮ ಪಂಚಾಯತಿ ಸದಸ್ಯ ವಿರೂಪಾಕ್ಷ ಸ್ವಾಮಿ, ಶರಣಪ್ಪ ಕೊಳಕೂರ, ಅಂಬಾಭವಾನಿ ಸಂಘದ ಅಧ್ಯಕ್ಷ ಲಕ್ಷ್ಮಣ ಹೊನ್ನಾಳಿ ಸೇರಿದಂತೆ ಗ್ರಾಮದ ನೂರಾರು ಜನ ಉಪಸ್ಥಿತರಿದ್ದರು.