ಹಾಸನ: ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಬಂಧನ ಸಾಧ್ಯತೆ ಎದುರಾಗಿದೆ.
ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರಿಗಾಗಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಭವಾನಿ ರೇವಣ್ಣ ಮೇ 15 ರಂದು ಎಸ್ಐಟಿಗೆ ಲಿಖಿತ ಪತ್ರ ನೀಡಿದ್ದರು. ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ತಮ್ಮ ತನಿಖೆ ಅವಶ್ಯಕತೆ ಇದ್ದರೆ ತಾವು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಹೇಳಿದ್ದರು.
ಇಂದು ಭವಾನಿ ರೇವಣ್ಣ ವಿಚಾರಣೆಗಾಗಿ ಹೊಳೆನರಸೀಪುರಕ್ಕೆ ಎಸ್ಐಟಿ ತಂಡ ಆಗಮಿಸಲಿದೆ. ಬಂಧನ ಭೀತಿ ನಡುವೆ ಇಂದು ಎಸ್ಐಟಿ ಎದುರು ಹಾಜರಾಗ್ತಾರಾ ಭವಾನಿ ಎಂಬುದು ಕುತೂಹಲ ಮೂಡಿಸಿದೆ.
ಭವಾನಿ ಅವರ ಪತ್ರವನ್ನೇ ಉಲ್ಲೇಖಿಸಿ ಎಸ್ಐಟಿ ಶುಕ್ರವಾರ ಮತ್ತೊಂದು ನೋಟಿಸ್ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿಚಾರಣೆ ಅಗತ್ಯ ಇದೆ. ಹಾಗಾಗಿ ಜೂ.1 ರಂದು ವಿಚಾರಣೆಗೆ ಬರುವುದಾಗಿ ತಿಳಿಸಿತ್ತು. ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ನಡುವೆ ನೀವು ತಿಳಿಸಿದ ವಿಳಾಸಕ್ಕೆ ಬರುತ್ತೇವೆ. ಈ ಸಮಯದಲ್ಲಿ ನೀವು ಖುದ್ದು ಹಾಜರಿರಬೇಕು ಎಂದು ಎಸ್ಐಟಿ ಸೂಚಿಸಿತ್ತು.
ಇಂದು ಮಹಿಳಾ ಅಧಿಕಾರಿಗಳ ಜೊತೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ವಿಚಾರಣೆಗೆ ಆಗಮಿಸುವ ಬಗ್ಗೆ ನೋಟಿಸ್ನಲ್ಲಿ ತಿಳಿಸಿತ್ತು.