ಕಮಲನಗರ: ‘ಸರ್ಕಾರದ ಅನುಮತಿ ಪಡೆಯದೆ ಶಾಲಾ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಅನಧಿಕೃತ ತರಬೇತಿ ಕೇಂದ್ರಗಳನ್ನು ಕೂಡಲೇ ಮುಚ್ಚಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತುಳಸಿರಾಮ ಆರ್.ದೊಡ್ಡಿ ತಿಳಿಸಿದ್ದಾರೆ.
ಪಟ್ಟಣದ ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಪ್ರತೀಕ ಫೌಂಡೇಶನ್, ಅಕ್ಷರ ನವೋದಯ ಕೋಚಿಂಗ್, ಹಾಗೂ ಭಾಗೀರಥಿ ಪಬ್ಲಿಕ್ ಸ್ಕೂಲ್ ಅನಧಿಕೃತ ಶಾಲೆಗಳು ಎಂದು ಬಿಇಒ ತಿಳಿಸಿದ್ದಾರೆ.
ಕೃಷಿ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಸುತ್ತಿರುವ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಸರ್ಕಾರದ ಅನುಮತಿ ಪಡೆಯದೆ ಶಾಲಾ ಮಕ್ಕಳಿಗೆ ತರಬೇತಿ ನೀಡುವುದು ಗಂಭೀರ ಅಪರಾಧ. ಕ್ರಿಮಿನಲ್ ಮೊಕದ್ದಮೆಯಾಗುತ್ತದೆ. ಆದರಿಂದ ಈ ಕೂಡಲೇ ನಿಮ್ಮ ತರಬೇತಿ ಕೇಂದ್ರ ಮುಚ್ಚಿ ಎಂದು ಕೇಂದ್ರದ ಮಾಲೀಕರಿಗೆ ನೋಟಿಸ್ ನೀಡಿದರು.
‘ನೀವು ಸರ್ಕಾರದ ಅನುಮತಿ ಪಡೆಯದೆ ನಿಯಮಬಾಹಿರವಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ನಿಮ್ಮಲ್ಲಿ ಮೂಲ ಸೌಲಭ್ಯ, ಗಾಳಿ, ಬೆಳಕು ಇರದ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸುತ್ತಿರುದು ಕಂಡುಬಂದಿದೆ. ಕೆಲ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದಿದ್ದಾರೆ. ಈ ಮಕ್ಕಳ ದಾಖಲಾತಿ ಯಾವ ಶಾಲೆಯಲ್ಲಿದೆ. ಈ ಮಕ್ಕಳ ಹಾಜರಾತಿ ಯಾವ ಶಿಕ್ಷಕರು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರ ವಿರುದ್ಧ ಸೂಕ್ತ ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದ್ದರು.
ಬಿಆರ್ಪಿ ಶಶಿಕಾಂತ ಬಿಡವೆ, ಬಿಆರ್ಸಿ ಪ್ರಕಾಶ ರಾಠೋಡ್, ಸಿಆರ್ಸಿ ರಮಾಕಾಂತ ಕಾಳೆ, ಮಹಾದೇವಪ್ಪ ಮಡಿವಾಳ, ನಾಗೇಶ ಸಂಗಮೆ, ಶಿವಕುಮಾರ, ವೆಂಕಟ ಬಾಲಾಜಿ, ನೌನಾಥ ಇತರರು ಹಾಜರಿದ್ದರು.