ತುಮಕೂರು: ಬ್ರಿಟಿಷರು ಬಿಟ್ಟು ಹೋಗಿರುವ ಇಂಗ್ಲಿಷ್ ಭಾಷೆಗೆ ದಾಸರಾಗಿದ್ದೇವೆ. ಸ್ವಾಭಿಮಾನ ಬಿಟ್ಟು ಕಲಿಯುತ್ತಿದ್ದೇವೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದರು.
ಮಂಗಳವಾರ ಜಿಲ್ಲಾ ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದ ನಂತರ ಮಾತನಾಡಿದರು. ವ್ಯಾಪಾರದ ಸಲುವಾಗಿ ದೇಶಕ್ಕೆ ಬಂದು ನಮ್ಮನ್ನು ಆಳಿದ್ದಾರೆ, ನಮ್ಮ ಸಂಸ್ಕೃತಿ ನಾಶ ಮಾಡಿದ್ದಾರೆ. ದೇಶವನ್ನೇ ಕೊಳ್ಳೆ ಹೊಡೆದಿದ್ದಾರೆ. ಕೊನೆಗೆ ಭಾಷೆ ಹೇರಿ ಹೋಗಿದ್ದಾರೆ. ಇಂಗ್ಲಿಷ್ ಕಲಿಯುವುದೇ ಅದ್ಭುತ ಎಂದು ಭಾವಿಸಿದ್ದೇವೆ ಎನ್ನುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿದರು.
‘ನಾನು ಸಚಿವನಾದ ನಂತರ ಗೃಹ ಇಲಾಖೆ ಆದೇಶಗಳನ್ನು ಕನ್ನಡದಲ್ಲೇ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಪೊಲೀಸ್ ಕವಾಯಿತು ಹಾಗೂ ಇತರ ಸಂದರ್ಭಗಳಲ್ಲಿ ಕನ್ನಡದಲ್ಲೇ ನಿರ್ದೇಶನ ನೀಡುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.