ತುಮಕೂರು: ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ 231 ಟಿಪ್ಪು ಸಂದಲ್ ಉರುಸ್ಗೆ ಹಾಲಿ ಶಾಸಕ ಸಿ.ಬಿ.ಸುರೇಶ್ಬಾಬು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಇಬ್ಬರೂ ಭಾನುವಾರ ಹುಳಿಯಾರಿನಲ್ಲಿ ಶುಭ ಹಾರೈಸಿದರು. ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಮಲಿ ಅವರ ನೇತೃತ್ವದಲ್ಲಿ ಚಿತ್ರದುರ್ಗದಿಂದ ಶ್ರೀರಂಗಪಟ್ಟಣಕ್ಕೆ ಹೊರಟಿರುವ ಸಂದಲನ್ನು ಮಾರ್ಗಮದ್ಯೆ ಚಿಕ್ಕನಾಯಕನಹಳ್ಳಿನ ತಾಲೂಕಿನ ಹುಳಿಯಾರಿನಲ್ಲಿ ಸ್ವಾಗತಿಸಿ ಪುಷ್ಪಮಾಲೆ ಹಾಕಿ ಗೌರವಿಸಿ ಶಾಂತಿ ಸೌಹಾರ್ದತೆಗಾಗಿ ಆಚರಿಸುತ್ತಿರುವ ಸಂದಲ್ ಉರುಸ್ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅವರು ಮಾತನಾಡಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಇಂತಹ ಉರುಸ್ ಹೆಚ್ಚಾಗಿ ನಡೆಯಬೇಕು. ಇನ್ನೂರು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ಟಿಪ್ಪು ಸಂದಲ್ ಉರಸ್ ದೇಶದ ಸಾಮರಸ್ಯದ ಸಂಕೇತವಾಗಿದೆ. ಚಿಕ್ಕನಾಯಕನಹಳ್ಳಿಯಲ್ಲೂ ತಾತಯ್ಯನ ಉರುಸ್ ಅನೇಕ ವರ್ಷಗಳಿಂದ ಹಿಂದೂ ಮುಸ್ಲೀಮರು ಜೊತೆಯಲ್ಲಿ ನಡೆಸಿಕೊಂಡು ಬರುತ್ತಿರುವುದು ತಾಲೂಕಿನ ಭಾವೈಕ್ಯತೆಗೆ ಸಾಕ್ಷ್ಯಿ. ಇಂದು ಟಿಪ್ಪು ಉರುಸ್ಗೆ ತೆರಳುತ್ತಿರುವ ಸಂದಲ್ ಪೂಜಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರು ಮಾತನಾಡಿ, 230 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಆರಂಭಿಸಿದ ಟಿಪ್ಪು ಸಂದಲ್ ಉರುಸ್ಗೆ ಸರ್ಕಾರವೂ ಸಹ ಸಹಕಾರ ನೀಡಿ ಮುಂದುವರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಚಿತ್ರದುರ್ಗದಿಂದ ಹುಳಿಯಾರು ಮಾರ್ಗದಲ್ಲಿ ಉರುಸ್ ಯಶಸ್ಸಿಗೆ 20 ವರ್ಷಗಳಿಂದ ಸಂದಲ್ ತೆಗೆದುಕೊಂಡು ಹೋಗುವ ಮೂಲಕ ಚಿತ್ರದುರ್ಗದ ಖಾಸಿಮಲಿ ಮಾದರಿಯಾಗಿದ್ದಾರೆ. ಖಾಸಿಮಲಿ ಅವರಲ್ಲಿನ ಟಿಪ್ಪು ಅಭಿಮಾನಕ್ಕೆ ಇದು ಪ್ರತೀಕವಾಗಿದೆ. ಸೌಹಾರ್ದತೆಯ ದೃಷ್ಠಿಯಿಂದ ಟಿಪ್ಪು ಸಂದಲ್ ಉರುಸ್ ಯಶಸ್ಸಿಗೆ ಶುಭ ಕೋರುವುದಾಗಿ ತಿಳಿಸಿದರು.
ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಮಲಿ ಮಾತನಾಡಿ, ಚಿತ್ರದುರ್ಗದಿಂದ ನಮ್ಮಂತೆ ಟಿಪ್ಪು ಜನ್ಮಸ್ಥಳ ದೇವನಹಳ್ಳಿ, ಬೆಂಗಳೂರು, ಮೈಸೂರು, ಹೀಗೆ ರಾಜ್ಯದ ಅನೇಕ ಜಿಲ್ಲೆಗಳಿಂದ ಪವಿತ್ರ ಗಂಧವನ್ನು ಉರುಸ್ಗಾಗಿ ಶ್ರೀರಂಗಪಟ್ಟಣಕ್ಕೆ ತರಲಾಗುತ್ತದೆ. ಟಿಪ್ಪು ಸಮಾಧಿ ಸ್ಥಳ ಗುಂಬಸ್ವರೆವಿಗೂ ಕನ್ನಡ ಮತ್ತು ಉರ್ದು ಲಾವಣಿ ಹಾಡುತ್ತಾ 3 ಕಿ.ಮೀ. ವರೆವಿಗೂ ಮೆರವಣಿಗೆ ಮಾಡಲಾಗುತ್ತಿದೆ. ಈ ಮೆರವಣಿಗೆಯಲ್ಲಿ ದೇಶದ ವಿವಿಧ ರಾಜ್ಯಗಳ ಹಿಂದೂ ಮುಸ್ಲಿಂ ಇಬ್ಬರೂ ಭಾಗಿಯಾಗಿ ಆಚರಿಸಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಲಾಗುತ್ತದೆ ಎಂದು ವಿವರಿಸಿದರು.
ಇನ್ನು ಈ ಸಂದರ್ಭದಲ್ಲಿ ಪಪಂ ಸದಸ್ಯರುಗಳಾದ ಫ್ರೂಟ್ ಸಿದ್ದೀಕ್, ಜುಬೇರ್, ಹುಳಿಯಾರಿನ ಟಿಪ್ಪು ಸಂಘದ ಅಪ್ಸರ್, ಎಂ.ಡಿ.ಫಯಾಜ್, ಮುಜೀಬ್ ಅಲಿ, ಸೈಯದ್ ಸಾದತ್, ಇಮ್ರಾಜ್, ಸಜ್ಜಾದ್, ಉಬೇದುಲ್ಲಾ, ಡಿಶ್ಬಾಬು, ಮುಬಾರಕ್ ಇಮ್ರಾನ್, ಫಿನ್ರೂನ್, ಅಫ್ರತ್, ಅಬ್ದುಲ್ಲಾ, ತನ್ನು, ಸಲ್ಮಾನ್, ಜಬೀಉಲ್ಲಾ ಮತ್ತಿತರರು ಇದ್ದರು.