ತುಮಕೂರು: ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ ಒಂದು ಕುರಿ ಹೊತ್ತೊಯ್ದು ಹೊರ ವಲಯದಲ್ಲಿ ಅರೆಬರೆ ತಿಂದು ಬಿಟ್ಟು ಹೋದ ಘಟನೆ ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜವರೇಗೌಡನಪಾಳ್ಯ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಕೋಟಪ್ಪ ಎಂಬ ರೈತರಿಗೆ ಸೇರಿದ ಕೊಟ್ಟಿಗೆ ಮನೆಗೆ ನಸುಕಿನಲ್ಲಿ ವೇಳೆ ನುಗ್ಗಿದ ಚಿರತೆ ಅಲ್ಲಿದ್ದ ನಾಲ್ಕು ಕುರಿಗಳ ಪೈಕಿ ಒಂದು ಕುರಿಯನ್ನು ಕ್ಷಣಾರ್ಧದಲ್ಲಿ ಹೊತ್ತು ಮನೆಯಿಂದ ಸುಮಾರು 300 ಮೀಟರ್ ದೂರ ತೆರಳಿ ತಿಂದು ತನ್ನ ಹಸಿವು ನೀಗಿಸಿಕೊಂಡು ಅರೆಬರೆ ಕಳೇಬರ ಬಿಟ್ಟು ಕಣ್ಮರೆಯಾಗಿದೆ.
ಸುಮಾರು 20 ಸಾವಿರ ಬೆಲೆಯ ಕುರಿ ಬಲಿಯಿಂದ ಕೋಟಪ್ಪ ಅವರಿಗೆ ನಷ್ಟವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಚಿರತೆ ಸುಳಿವು ಪತ್ತೆಗೆ ಮುಂದಾದರು. ಈ ಭಾಗದಲ್ಲಿ ಈಗಾಗಲೇ ಮೂರು ಚಿರತೆ ಸೆರೆಯಾಗಿದ್ದು, ಇನ್ನೂ ಚಿರತೆಗಳು ಇವೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹಾವಳಿ ನೀಡುವ ಚಿರತೆ ಮಕ್ಕಳ ಮೆಲೇರೆಗುವ ಮುನ್ನ ಕ್ರಮವಹಿಸಿ ಚಿರತೆ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.