ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಉಜಿರೆ, ಯುವ ರೆಡ್ ಕ್ರಾಸ್ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಚನೆ ಬಿ.ಸಿ.ಟ್ರಸ್ಟ್ (ರಿ) ಧರ್ಮಸ್ಥಳ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ ಸಹಭಾಗಿತ್ವದಲ್ಲಿ ಎಸ್.ಡಿ.ಎಮ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ “ವಿಪತ್ತು ನಿರ್ವಹಣೆಯಲ್ಲಿ ಮುಂಜಾಗ್ರತಾ ಕ್ರಮಗಳು” ವಿಷಯವಾಗಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ರವರು ತರಬೇತಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ತುಂಬಿದರೆ ಅವರಲ್ಲಿ ನಿಜವಾದ ಸೇವಾ ಮನೋಭಾವ ಬೆಳೆಯಲು ಸಾಧ್ಯ. ವಿಪತ್ತು ನಿರ್ವಹಣಾ ಕಾರ್ಯಕ್ರಮದ ಮೊದಲ ಆಶಯವೆಂದರೆ ” ಮೊದಲು ನಿಮ್ಮ ರಕ್ಷಣೆ, ನಿಮ್ಮ ಸುರಕ್ಷತೆ”. ಯಾವುದೇ ವಿಪತ್ತುಗಳಿಗೆ ಸ್ಪಂದಿಸುವ ಸಮಯದಲ್ಲಿ ಮೊದಲಾಗಿ ನಮ್ಮ ರಕ್ಷಣೆಗೆ ಆದ್ಯತೆ ನೀಡಬೇಕು. ನಮ್ಮ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಸೇವೆಗಿಳಿಯಬೇಕು ಎಂದರು. ವಿಪತ್ತುಗಳು ಉಂಟಾದಾಗ ಕೆಲವು ಸೂಕ್ಷ್ಮತೆಗಳ ಬಗ್ಗೆ ಅರಿವು ಇದ್ದರೆ ಅಪಾಯ ತಡೆಯಬಹುದು. ಬದಲಾಗಿ ಧಿಗ್ರಮೆಗೊಂಡರೆ ಅಪಾಯ ಜಾಸ್ತಿ. ವಿಪತ್ತು ಘಟಿಸಿದಾಗ ಎನ್.ಡಿ.ಆರ್.ಎಫ್ ತಂಡ ಸ್ಥಳದಲ್ಲಿ ಇರುವುದಿಲ್ಲ. ಇಂತಹ ಸಮಯದಲ್ಲಿ ಸ್ಥಳಕ್ಕೆ ಬಹಳ ಕ್ಷಿಪ್ರವಾಗಿ ತಲುಪಿದರೆ ಸಮಸ್ಯೆ ಕಡಿಮೆ ಆಗಬಹುದು ಎಂದು ಪೂಜ್ಯರು ಶೌರ್ಯ ಕಾರ್ಯಕ್ರಮ ಆರಂಭಿಸಿದ್ದಾರೆ. ಶೌರ್ಯ ಸ್ವಯಂಸೇವಕರಿಂದ ಮೂರು ವರ್ಷಗಳಲ್ಲಿ 1,23,000 ಕ್ಕೂ ಅಧಿಕ ಸೇವಾಕಾರ್ಯಗಳು ಆಗಿವೆ. ವಿದ್ಯಾರ್ಥಿಗಳಲ್ಲಿ ಸಹ ಸುರಕ್ಷತಾ ಬೀಜ ಮಂತ್ರವನ್ನು ಬಿತ್ತಿದರೆ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಬಹುದು. ತರಬೇತಿಯಲ್ಲಿ ತಾವು ಕಲಿತದ್ದನ್ನು ವಿದ್ಯಾರ್ಥಿಗಳು ಇತರರಿಗೆ ಹೇಳಬೇಕು ಎಂದರು.
ಸಭೆಯಲ್ಲಿ ಕಾಲೇಜು ಪ್ರಾಚಾರ್ಯ ಸಂತೋಷ್, , ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್, ಕಾರ್ಯಕ್ರಮಾಧಿಕಾರಿ ಅವನೀಶ್ ಪಿ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಮುಳುಗು ತಜ್ಞ ಮಲ್ಫೆ ಈಶ್ವರ್, ಉರಗ ತಜ್ಞ ಸ್ನೇಕ್ ಮಹೇಶ್, ಅಗ್ನಿಶಾಮಕ ದಳದ ಉಸ್ಮಾನ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ವಿಪತ್ತು ನಿರ್ವಹಣಾ ಮುಂಜಾಗ್ರತಾ ಕ್ರಮಗಳು, ಶೌರ್ಯ ಕಾರ್ಯಕ್ರಮ, ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು ಮುಂತಾದವುಗಳ ಬಗ್ಗೆ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್ ರವರು ಮಾಹಿತಿ ನೀಡಿದರು. ತರಬೇತಿಯಲ್ಲಿ 60 ಮಂದಿ ಭಾಗವಹಿಸಿದ್ದು, ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬೆಳ್ತಂಗಡಿ, ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಮತ್ತು ಕ್ಯಾಪ್ಟನ್ ಹಾಗೂ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು, ಘಟಕದ ಪ್ರತಿನಿಧಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು.