ತುಮಕೂರು: ನೂರಕ್ಕೆ ನೂರು ಪಾಲು ತುಮಕೂರು ನಗರಕ್ಕೆ ನನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಜಿ ಸಚಿವ ಎಸ್.ಶಿವಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಯಡಿಯೂರಪ್ಪ ಮಾತು ಕೇಳಿ ಚುನಾವಣೆ ಯಿಂದ ದೂರ ಉಳಿದಿದ್ದೆ ಆದರೆ ಈ ಭಾರಿ ನನ್ನ ಸ್ಪರ್ಧೆ ಖಚಿತ ಎಂದರು.
ಬಿಜೆಪಿ ಕಾರ್ಯಕರ್ತರು ದಯಮಾಡಿ ಯಾವುದೇ ಗೊಂದಲ ಪಡಬೇಕಾಗಿಲ್ಲ, ನಾನು ಹುಟ್ಟ ಹೋರಾಟಗಾರ ನನ್ನ ಶಾಲಾ ದಿನಗಳಿಂದ ಹಿಡಿದು ಜನಸಂಘ, ಆರ್.ಎಸ್.ಎಸ್, ಎಮರ್ಜೆನ್ಸಿ ಸಮಯದಲ್ಲಿ ಹೇಮಾವತಿ ನೀರಿನ ಹೋರಾಟದಲ್ಲಿ, ಹೀಗೆ ಹತ್ತು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ನಾನು, ನನ್ನ ಜೀವವನ್ನು ಬಿಜೆಪಿ ಪಕ್ಷದ ರಾಜಕೀಯ ಜೀವನಕ್ಕೆ ಮಾತ್ರ ಮುಡುಪಾಗಿಟ್ಟಿರುವೆ ಎಂದರು.
ಹಲವಾರು ರಾಜಕೀಯ ಪಕ್ಷದವರು ಆಮಿಷ ಒಡ್ಡಿದರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ, ಅಂತಹುದರಲ್ಲಿ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಮೇಯವೇ ಇಲ್ಲ ಎಂದು ಹೇಳಿದರು.
ತುಮಕೂರು ನಗರದ ಎಲ್ಲಾ ಬಡಾವಣೆಗಳಲ್ಲಿನ ಜನರ ಸಂಪರ್ಕ ನನಗೆ ಚೆನ್ನಾಗಿದೆ ಅದೂ ಅಲ್ಲದೇ ಬಹುತೇಕ ಎಲ್ಲಾ ಸಮುದಾಯಗಳ ಮುಖಂಡರು ಮತ್ತು ಜನರ ಸಂಪರ್ಕ ನನಗಿದೆ ಎಂದು ಹೇಳಿದರಲ್ಲದೇ, ಕರೋನಾ ಸಮಯದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ. ಎಲ್ಲ ಸಮುದಾಯದ ಬೆಂಬಲದೊಂದಿಗೆ ನಾನು ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗೆ ನಾಮಿನೇಷನ್ ಮಾಡಲು ನಾನು ಸಕಲ ವ್ಯವಸ್ಥೆ ಮಾಡಿಕೊಂಡಿದ್ದೇನೆ ಶುಭ ಮುಹೂರ್ತ ಮತ್ತು ಗಳಿಗೆಯಲ್ಲಿಯೇ ನಾನು ನಾಮಿನೇಷನ್ ಸಲ್ಲಿಸುತ್ತೇನೆ. ಜೋಳಿಗೆಯಲ್ಲಿ ಸಂಗ್ರಹವಾದ ಹಣದಿಂದಲೇ ನಾನು ಚುನಾವಣೆಯ ಠೇವಣಿ ನೀಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಧನಿಯಾ ಕುಮಾರ್, ಜಯಸಿಂಹ, ನರಸಿಂಹಮೂರ್ತಿ, ಚೌಡಪ್ಪ, ತರಕಾರಿ ಮಹೇಶ್, ಹರೀಶ್ ಮುಂತಾದವರು ಭಾಗವಹಿಸಿದ್ದರು.