ತುಮಕೂರು: ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡದೆ ಹಿಂದುಳಿದ ವರ್ಗದ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಬೆನ್ನಲ್ಲೇ ನೂರಾರು ಕಾಡು ಗೊಲ್ಲ ಸಮುದಾಯದ ಮುಖಂಡರು ಬೆಟ್ಟಸ್ವಾಮಿ ಹಿಂಬಾಲಿಸಿ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಗುಬ್ಬಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಗುಬ್ಬಿ ತಾಲ್ಲೂಕಿನ 102 ಗೊಲ್ಲರ ಹಟ್ಟಿಯಿಂದ ಸುಮಾರು 500 ಮಂದಿ ಬೆಟ್ಟಸ್ವಾಮಿ ಬೆಂಬಲಿಗರು ಜೆಡಿಎಸ್ ಸೇರ್ಪಡೆಯಾಗಿ ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿದ ಬಿಜೆಪಿ ವಿರುದ್ದವಾಗಿ ಜೆಡಿಎಸ್ ಅಭ್ಯರ್ಥಿ ನಾಗರಾಜು ಗೆಲ್ಲಿಸುವ ಪಣ ತೊಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಬೇಸತ್ತ ಕಾಡು ಗೊಲ್ಲರ ಯುವಕ ಮಿತ್ರರು ಪ್ರಾದೇಶಿಕ ಪಕ್ಷ ಜೆಡಿಎಸ್ ತತ್ವ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಅಹಿಂದ ಮತಗಳನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡ ಬಗ್ಗೆ ಇವತ್ತಿನ ಪೀಳಿಗೆ ಬಿಜೆಪಿ, ಕಾಂಗ್ರೆಸ್ ತಂತ್ರ ತಿಳಿದು ಕುಮಾರಣ್ಣ ಅವರ ಗ್ರಾಮೀಣ ಅಭಿವೃದ್ದಿ ಆಲೋಚನೆ ಒಪ್ಪಿ ತಂಡೋಪ ತಂಡವಾಗಿ ಆಗಮಿಸಿರುವುದು ಸಂತಸ ತಂದಿದೆ. ಸ್ವಯಂ ಪ್ರೇರಿತವಾಗಿ ಬಂದ ಯುವಕ ಮಿತ್ರರ ಒತ್ತಾಸೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಪೂಜಾರ್ ಯರ್ರಪ್ಪ ಮಾತನಾಡಿ ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹಾಗೂ ನಿಗಮ ಮಂಡಳಿ ಹೆಸರಿನಲ್ಲಿ ನಮ್ಮನ್ನು ಹತ್ತಿರ ಸೆಳೆದು ಈಗ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಾತಿ ನೋಡಿ ಹಿಂದುಳಿದ ವರ್ಗದ ಬೆಟ್ಟಸ್ವಾಮಿ ಅವರನ್ನು ದೂರ ಬಿಟ್ಟ ಬಿಜೆಪಿ ವರ್ತನೆ ಇಡೀ ಸಮುದಾಯಕ್ಕೆ ನೋವು ತಂದಿದೆ. ಈ ಹಿನ್ನಲೆ ಬೆಟ್ಟಸ್ವಾಮಿ ಜೆಡಿಎಸ್ ನತ್ತ ಹೋಗುವುದರಿಂದ ನಾವು ಸಹ ಜೆಡಿಎಸ್ ಸೇರುತ್ತೇವೆ ಎಂದು ತಿಳಿಸಿದರು.
ಜೀಗನಹಳ್ಳಿ ವೀರೇಶ್ ಮಾತನಾಡಿ ಮೀಸಲಾತಿ ವಿಚಾರದಲ್ಲಿ ಮಾತ್ರ ಕಾಡು ಗೊಲ್ಲ ಎಂಬ ಹೆಸರು ಮುನ್ನೆಲೆಗೆ ಬಂದಿದೆ. ರಾಜಕೀಯ ವಿಚಾರದಲ್ಲಿ ನಮ್ಮಲ್ಲಿ ಗೊಲ್ಲ ಜನಾಂಗ ಒಂದೇ ಎಂದು ಓಡಾಡುತ್ತವೆ. ಕಳೆದ ಬಾರಿ ಬೆಟ್ಟಸ್ವಾಮಿ ಅವರಿಗೆ ಟಿಕೆಟ್ ನೀಡಿದಾಗ ನಾವೆಲ್ಲರೂ ಒಗ್ಗಟ್ಟಿನಲ್ಲಿ ದುಡಿದಿದ್ದೆವು. ಬಿಜೆಪಿ ನಮ್ಮ ಗೊಲ್ಲ ಸಮಾಜಕ್ಕೆ ಅವಮಾನ ಮಾಡಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಬೆಟ್ಟಸ್ವಾಮಿ ಅವರನ್ನು ಹಿಂಬಾಲಿಸಿ ಜೆಡಿಎಸ್ ಸೇರಿದ್ದೇವೆ ಎಂದರು.
ಕಾಡು ಗೊಲ್ಲರ ಸಂಘದ ಜಿಲ್ಲಾ ನಿರ್ದೇಶಕ ಶಿವಗಂಗಯ್ಯ ಹಾಗೂ ಯಾದವ ಯುವಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗುಬ್ಬಿಹಟ್ಟಿ ಮಹಾಲಿಂಗಯ್ಯ ಮಾತನಾಡಿ ಹಿಂದುಳಿದ ವರ್ಗಗಳಲ್ಲಿ ತೀರಾ ಹಿಂದುಳಿದು ನಾಗರೀಕ ಸಮಾಜದಿಂದ ದೂರ ಉಳಿದ ಕಾಡು ಗೊಲ್ಲ ಸಮಾಜದಿಂದ ಬೆಳೆದ ನಮ್ಮ ಬೆಟ್ಟಸ್ವಾಮಿ ಅವರ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿಯ ಕೆಲ ಮುಖಂಡರು ಕಳೆದ ಬಾರಿ ಕೂಡಾ ಬಂಡಾಯ ತೋರಿ ತೊಡಕು ಮಾಡಿದ್ದರು. ಈಗ ಸ್ವಜಾತಿಯ ಪ್ರೇಮ ಹೆಚ್ಚಾಗಿ ಪೂರ್ಣ ಕಾಲು ಎಳೆದರು. ಈ ಹಿನ್ನಲೆ ನಾವೆಲ್ಲರೂ ನೋವಿನಲ್ಲೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದೆವು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡರಾದ ಮಾಂತೇಶ, ಶಿವಣ್ಣ, ದಯಾನಂದ್ ಇತರರು ಇದ್ದರು.