ತುಮಕೂರು: ಕಾಂಗ್ರೆಸ್ ಸಚಿವರು ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯ ಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ.ಸೂಲಗಿತ್ತಿ ನರಸಮ್ಮ ನವರ 102ನೇ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಪರ್ಸಂಟೇಸ್ ದಂಧೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದರೆ ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ ಮುಖ್ಯಮಂತ್ರಿಯಾಗಿದ್ದವರು ಅವರು. ಕಾಂಗ್ರೆಸ್ನ ಸಚಿವರು ಯಾರೂ ಸಹ ಈ ಪರ್ಸಂಟೇಸ್ ದಂಧೆಯಲ್ಲಿ ಇರಲಿಲ್ಲ ಎಂದು ಹೇಳಿದರು.
ರಾಜ್ಯದ ಜನ ಬಿಜೆಪಿ ಸರ್ಕಾರದ ಆಡಳಿತವನ್ನು ಗಮನಿಸುತ್ತಿದ್ದಾರೆ. ಮುಂಬರುವ 2023ರಲ್ಲಿ ಬಿಜೆಪಿಗೆ ಪ್ರತ್ಯುತ್ತರವನ್ನು ಜನರೇ ಕೊಡಲಿದ್ದಾರೆ ಎಂದು ಹೇಳಿದರು.