ತುಮಕೂರು: ಜಗತ್ತಿನಲ್ಲಿಂದು ಎಲ್ಲ ಕ್ಷೇತ್ರಗಳೂ ಸ್ವಾರ್ಥಮಯವಾಗಿ ಕಲುಷಿತಗೊಂಡಿದ್ದು ವಿಶ್ವ ಅಶಾಂತಿಯ ಬೀಡಾಗಿದೆ. ಹಾಗಾಗಿ ಮನುಜ ಈ ಸ್ವಾರ್ಥತನವನ್ನು ಬಿಟ್ಟು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಮಾತ್ರ ರಾಷ್ಟದ ಅಭ್ಯುದಯ ಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಮೈದಾಳದ ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮದ ಬೆಳ್ಳಿಹಬ್ಬ ಸಮಾರಂಭ ಹಾಗೂ ರಜತಮಹೋತ್ಸವ ಶಾಲಾಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಕುಗ್ರಾಮವೊಂದರ ಬಡತನದ ಕೆಳವರ್ಗದಿಂದ ಬಂದ ಶರಣ ಲೇಪಾಕ್ಷಯ್ಯನವರು ತಮ್ಮ ಸ್ವಾರ್ಥವನ್ನು ದೂರತಳ್ಳಿ ನಿಸ್ವಾರ್ಥವಾಗಿ ನಾಡಿನಾದ್ಯಂತದ ಅಶಕ್ತ ಬಡಮಕ್ಕಳಿಗೆ ಅನ್ನ, ಆಶ್ರಯ ಹಾಗೂ ಅಕ್ಷರ ದಾಸೋಹವನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತಾ ನಿಷ್ಕಾಮಸೇವೆ ಮಾಡಿದ ಆದರ್ಶ ವ್ಯಕ್ತಿಯಾಗಿದ್ದಾರೆ.
ಇಂತಹ ಮಕ್ಕಳ ಶೈಕ್ಷಣಿಕ ಸೇವಾಕಾರ್ಯದಲ್ಲಿ ಅವರ ಕುಟುಂಬವರ್ಗದವರ ಸೇವೆಯೂ ಅತ್ಯಂತ ಶ್ಲಾಘನೀಯವಾಗಿದೆ ಎಂದರಲ್ಲದೆ, ಪ್ರಸ್ತುತ ದೇಶ ಮೆಕಾಲೆ ಶಿಕ್ಷಣದ ಪಾಶದಿಂದ ಹೊರಬಂದು ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಶಿಕ್ಷಣದತ್ತ ಪರಿವರ್ತನೆಗೊಳ್ಳಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ, ‘ಸೇವೆ’ಎಂಬ ಪದಕ್ಕೆ ಉತ್ತಮ ಅರ್ಥ ನೀಡಿದ ಶರಣ ಲೇಪಾಕ್ಷಯ್ಯನವರ ಇಡೀ ಕುಟುಂಬವೇ ಈ ಸೇವಾಶ್ರಮದ ಅಭ್ಯುದಯಕ್ಕೆ ಶ್ರಮವಹಿಸಿದೆ. ಇದು ಅಭಿನಂದನೀಯ ಹಾಗೂ ಅನುಕರಣೀಯ ಸಂಗತಿಯಾಗಿದ್ದು ಆಶ್ರಮದ ಮಕ್ಕಳ ಶಿಸ್ತಿನ ಚಟುವಟಿಕೆಗಳು ಆದರ್ಶನೀಯವಾಗಿವೆ ಎಂದು ಸಂತಸ ವ್ಯಕ್ತಪಡಿಸಿ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ 25 ಮಂದಿ ಕೊಡುಗೈದಾನಿಗಣ್ಯರಿಗೆ ಶಾಲು ಹೊದಿಸಿ ಫಲತಾಂಬೂಲವಿತ್ತು ಗೌರವಿಸಿದರು.
ಜಿಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ವೀರಜ್ಜನಹಳ್ಳಿ ಮಠದ ಶ್ರೀ ಕರುಣಾಕರ ಶ್ರೀಗಳು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಶಿಕ್ಷಕ ಜಯಣ್ಣ, ಸಮಾರಂಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್, ಪಕ್ಷದ ನಂದೀಶ್, ಮೈದಾಳ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಾಲಾಮಂಜುನಾಥ್, ಉಪಾಧ್ಯಕ್ಷ ನರಸಿಂಹಮೂರ್ತಿ, ಡಿಡಿಪಿಐ ನಂಜಯ್ಯ, ಡಯಟ್ನ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್, ಪಿಡಿಓ ಶಶಿಧರ್, ಮತ್ತಿತರರು ಉಪಸ್ಥಿತರಿದ್ದರು.