ಬೆಂಗಳೂರು : ಹಿಜಾಬ್, ಹಲಾಲ್ ಮಾಂಸ ವಿರೋಧದಂತಹ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಹಿಷ್ಣುತೆ, ಸಹಬಾಳ್ವೆ ಸಂವಿಧಾನದಲ್ಲಿದೆ. ಇದರ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಹಿಜಾಬ್ ನೂರಾರು ವರ್ಷದಿಂದ ಇದೆ. ಇದೊಂದು ಧಾರ್ಮಿಕ ಸಂಪ್ರದಾಯ. ಸರ್ಕಾರ ಮನಸ್ಸು ಮಾಡಿದ್ದರೆ ಆ ವಿವಾದ ಬಗೆಹರಿಸಹುದಿತ್ತು. ಆದರೆ ದುರುದ್ದೇಶದಿಂದ ದೊಡ್ಡದಾಗಿ ಬಿಂಬಿಸಿದ್ರು. ಚುನಾವಣೆಯವರೆಗೆ ಇದನ್ನೇ ಜನರ ಮುಂದಿಡ್ತಾರೆ. ನಾವು ಇದನ್ನ ತಡೆಯಬೇಕು, ನಾವು ಮಾತನಾಡಿದ್ರೆ ಏನಾಗುತ್ತೋ ಅನ್ನೋದು ಬೇಡ. ತಪ್ಪು ತಿಳಿದುಕೊಳ್ತಾರೆ ಅನ್ನೋದು ಬೇಡ. ಮೊದಲು ನಮಗೆ ಕ್ಲಾರಿಟಿ ಇರಬೇಕು. ನಾವು ಅಗ್ರೆಸ್ಸೀವ್ ಆಗಿ ಇದನ್ನ ಪ್ರತಿಪಾದಿಸಬೇಕು. ಇಲ್ಲದೇ ಹೋದರೆ ಸೆಕ್ಯೂಲರಿಸಂ ರಕ್ಷಿಸೋಕೆ ಆಗಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟರು.
2023ಕ್ಕೆ ಚುನಾವಣೆ ಬರುತ್ತಿದೆ, ಬಿಜೆಪಿ ಅನೇಕ ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರಧಾನಿಯೂ ಜನರ ಸಮಸ್ಯೆ ಬಗ್ಗೆ ಚರ್ಚೆಮಾಡಲಿಲ್ಲ. ದೇಶದ ಉದ್ದಗಲಕ್ಕೂ ಜನರನ್ನ ವಿಭಜಿಸುವ ಪ್ರಯತ್ನ ಮಾಡ್ತಿದ್ದಾರೆ. ಈಗ ರಾಜ್ಯದ ಚುನಾವಣೆ ಹತ್ತಿರ ಬಂದಿದೆ. ಅದಕ್ಕೆ ಹೆಚ್ಚು ಕೋಮುವಾದ ಹುಟ್ಟುಹಾಕ್ತಿದ್ದಾರೆ ಎಂದರು.
ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು. ಹಿಜಾಬ್, ಭಗವದ್ಗೀತೆ ಎಲ್ಲವನ್ನೂ ತಂದ್ರು. ಈಗ ಹಲಾಲ್ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ. ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿವೆ. ಯುವಕರಿಗೆ ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಡಿ.ಕೆಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ರು.