ರಾಮನಗರ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಹಿನ್ನೆಲೆಯಲ್ಲಿ ರಾಮನಗರದಲ್ಲಿಯೂ ವಿಶೇಷ ಆಚರಣೆಗಳು ನಡೆಯುತ್ತಿದ್ದು ಅದರ ಮುಂದುವರೆದ ಭಾಗವಾಗಿ ನಗರದಲ್ಲಿ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಆಚರಣಾ ಸಮಿತಿವತಿಯಿಂದ ನಗರದ ಛತ್ರದ ಬೀದಿಯಲ್ಲಿರುವ ಶ್ರೀ ರಾಮ ದೇವಾಲಯದ ಬಳಿ ಸೀತಾರಾಮ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪುರೋಹಿತರಾದ ನರಸಿಂಹಮೂರ್ತಿ ಮತ್ತು ರಾಧಾಕೃಷ್ಣ ಅವರ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
ಕಲ್ಯಾಣೋತ್ಸವಕ್ಕೂ ಮುನ್ನ ಶ್ರೀರಾಮ- ಸೀತಾ ಮಾತೆಯರ ಉತ್ಸವ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯ ಮುಂಭಾಗ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ಕೈಂಕರ್ಯಗಳು ಯಶಸ್ವಿಯಾಗಿ ನಡೆದವು. ನೂರಾರು ಭಕ್ತರು ಜೈಶ್ರೀರಾಮ್ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಈ ವೇಳೆ ಸಮಿತಿಯ ಮುಖ್ಯಸ್ಥ ಕೆ.ವಿ.ಉಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ವನವಾಸದ ಸಂದರ್ಭದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣರು ಇಲ್ಲಿನ ಶ್ರೀರಾಮದೇವರ ಬೆಟ್ಟಕ್ಕೆ ಆಗಮಿಸಿದ್ದರು ಎಂಬ ಮಾತಿದೆ. ಕಾಗೆಯ ರೂಪದಲ್ಲಿದ್ದ ಅಸುರನೊಬ್ಬ ಸೀತಾ ಮಾತೆಗೆ ತೊಂದರೆ ಕೊಟ್ಟಾಗ ಶ್ರೀರಾಮನು ಅಸುರನನ್ನು ಸಂಹಾರ ಮಾಡಿದ್ದ ಎಂದು ಹೇಳಲಾಗಿದೆ.
ಹೀಗಾಗಿಯೇ ಶ್ರೀರಾಮ ದೇವರ ಬೆಟ್ಟದಲ್ಲಿ ಕಾಗೆಗಳು ಕಾಣಸಿಗದು ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಬೆಟ್ಟದ ಮೇಲೆ ಶ್ರೀರಾಮನ ಬಾಣದಿಂದ ನಿರ್ಮಾಣವಾಗಿರುವ ಸೊಣೆಯಲ್ಲಿ ಸದಾ ನೀರಿನ ಶೇಖರಣೆ ಇರುತ್ತದೆ. ಈ ಪುರಾಣದ ಅಂಶಗಳು ಭಕ್ತರ ಸ್ಮರಣೆಗೆ ಕಾರಣವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೀತಾರಾಮ ಕಲ್ಯಾಣಮಹೋತ್ಸವವನ್ನು ನಾಗರೀಕರ ಅಪೇಕ್ಷೆಯ ಮೇರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಾಗರೀಕರು, ಪೊಲೀಸ್ ಇಲಾಖೆ ಮತ್ತು ಆಡಳಿತ ಸಹಕಾರ ನೀಡಿದೆ ಎಂದು ಕೆ.ವಿ.ಉಮೇಶ್ ತಿಳಿಸಿದರು.