ರಾಮನಗರ: ಮಹಿಳೆಯೊಬ್ಬರ ಸರ ಅಪಹರಣ ಮಾಡಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಪ್ರಕರಣದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಸರ ಅಪಹರಣ ಆರೋಪಿಗಳಾದ ನವೀನ್ ಮತ್ತು ಪ್ರಭಾಕರ್ ಎಂಬುವರು ಶಿಕ್ಷೆಗೆ ಒಳಗಾದವರು. ರಾಮನಗರದ ಸಿ.ಜೆ ಮತ್ತು ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ಕೆ.ಎಸ್ ಅವರು ಆರೋಪಿಗಳಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಪಾವತಿಸದೆ ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ ಅನುಭವಿಸುವಂತೆ ತೀರ್ಪು ನೀಡಿ ಆದೇಶ ಹೊರೆಡಿದ್ದಾರೆ.
ಬಿಡದಿ ಹೋಬಳಿ ಕಾಕರಾಮನಹಳ್ಳಿ ಗ್ರಾಮದ ಸಮೀಪ ಲಕ್ಷ್ಮಮ್ಮ ಎಂಬುವರು 2014ರ ಜನವರಿ 5ರಂದು ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಹಸುಗಳನ್ನು ಕಟ್ಟಿ ಹಾಕುವಾಗ ಬೈಕ್ನಲ್ಲಿ ಬಂದ ಆರೋಪಿಗಳಾದ ನವೀನ ಮತ್ತು ಪ್ರಭಾಕರ ಎಂಬ ಆರೋಪಿಗಳು ಲಕ್ಷ್ಮಮ್ಮ ಅವರ ಕತ್ತಿನಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿ ಅನಿಲ್ಕುಮಾರ್ ಅವರು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಅಭಿಯೋಜಕರಾಗಿ ಎನ್.ನಾಗರತ್ನ ಅವರು ವಾದ ಮಂಡನೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಬ್ಬರು ಆರೋಪಿಗಳ ಆರೋಪ ಸಾಭೀತಾದ ಕಾರಣ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.