ರಾಮನಗರ: ಬಿಡದಿ ಹೋಬಳಿ ವ್ಯಾಪ್ತಿಯ ಕೆಂಚನಕುಪ್ಪೆ ಹಾಗೂ ಎಂ.ಕರೇನಹಳ್ಳಿ ಗ್ರಾಮಗಳಿಗೆ ಸರಕಾರದಿಂದ ಮಂಜೂರಾಗಿದ್ದ ಸ್ಮಶಾನದ ಜಾಗಗಳಿಗೆ ಭೂಮಾಪನ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಹಾಗೂ ಹದ್ದುಬಸ್ತು ಗುರುತಿಸಿದರು.
ಗ್ರಾಮಸ್ಥರ ಬಹುದಿನಗಳ ಒತ್ತಾಯದ ಮೇರೆಗೆ ಕೆಂಚನಕುಪ್ಪೆ ಗ್ರಾಮಕ್ಕೆ ನಾಲ್ಕುವರೆ ಎಕರೆ ಹಾಗೂ ಎಂ.ಕರೇನಹಳ್ಳಿ ಗ್ರಾಮಕ್ಕೆ ಒಂದು ಎಕರೆ ಭೂಮಿ ಸ್ಮಶಾನಕ್ಕಾಗಿ ಸರಕಾರದಿಂದ ಮಂಜೂರಾಗಿತ್ತು. ಆದರೆ ನಿಗದಿತ ಜಾಗ ಗುರುತಿಸದ ಕಾರಣ ಗ್ರಾಮಸ್ಥರು ಸರ್ವೆ ಮಾಡಿ ಹದ್ದುಬಸ್ತು ಗುರುತಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಪುರಸಭೆ ಅಧಿಕಾರಿಗಳು, ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಸರ್ವೆ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಗುರುತಿಸುವ ಕೆಲಸ ಮಾಡಿದರು.
ಕೆಂಚನಕುಪ್ಪೆ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಮಂಜೂರಾಗಿರುವ ಒಟ್ಟು ನಾಲ್ಕುವರೆ ಎಕರೆ ಭೂಮಿಯ ಪೈಕಿ ಎರಡೂವರೆ ಎಕರೆಯನ್ನು ಪರಿಶಿಷ್ಠ ಜಾತಿ ಮತ್ತು ವರ್ಗಕ್ಕೆ ಹಾಗೂ ಉಳಿದೆರಡು ಎಕರೆ ಹಿಂದೂ ರುದ್ರಭೂಮಿಗೆಂದು ವರ್ಗೀಕರಿಸಲಾಗಿದೆ. ಈ ಜಾಗವನ್ನು ಸರ್ವೆ ಅಧಿಕಾರಿಗಳು ಗಡಿ ಗುರುತಿಸಿ ಕಲ್ಲು ನೆಡುವ ಕಾರ್ಯ ಮಾಡಿದರು.
ಈ ವೇಳೆ ಆರ್ಎಸ್ಎಸ್ಎನ್ ಮಾಜಿ ಅಧ್ಯಕ್ಷ ನರಸಿಂಹಯ್ಯ ಅವರು ಮಾತನಾಡಿ, ಶಾಸಕ ಎ.ಮಂಜುನಾಥ್ ಅವರ ಶಿಫಾರಸ್ಸಿನ ಮೇರೆಗೆ ಸರಕಾರ ಎರಡೂ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿತ್ತು. ಇದೀಗ ಜಾಗ ಗುರುತಿಸಲಾಗಿದ್ದು ಸ್ಥಳೀಯ ಪುರಸಭೆಯಿಂದ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಸ್ಥಳೀಯ ಪುರಸಭೆ ಸದಸ್ಯೆ ಲಲಿತಾ ನರಸಿಂಹಯ್ಯ, ಪುರಸಭೆ ಅಧಿಕಾರಿಗಳಾದ ನಾಗರಾಜು, ಕಿರಣ್ಕುಮಾರ್ ಮುಂತಾದವರು ಹಾಜರಿದ್ದರು.