ರಾಮನಗರ: ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಲ್ಲಿ ಖಾಲಿ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿಯೋಜನೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತಾಲ್ಲೂಕಿನ ಕೂಟಗಲ್ ಹೋಬಳಿ ಅಕ್ಕೂರು ಮತ್ತು ದೊಡ್ಡ ಗಂಗವಾಡಿ ಗ್ರಾಪಂಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಪಂಗಳಲ್ಲಿ ಪಿಡಿಒ ಅಧಿಕಾರಿಗಳ ಸಮಸ್ಯೆಯಿದೆ. ಕೆಲವು ಗ್ರಾಪಂ ಗಳಲ್ಲಿ ಕಾರ್ಯದರ್ಶಿಗಳು ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಪಂಗಳಲ್ಲಿ ಸರಾಗವಾಗಿ ಯಾವ ಕೆಲಸವೂ ಆಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಅಗತ್ಯವಿರುವ ಕಡೆ ಪಿಡಿಒ ಗಳ ನಿಯೋಜನೆಗಳಿಗೆ ಸೂಕ್ತ ಕ್ರಮವಹಿಸುವಂತೆ ಜಿಲ್ಲಾ ಮಂತ್ರಿಗಳು ಹಾಗೂ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತೆ ಮಾಡಿಕೊಡಲು ಅರ್ಜಿದಾರರನ್ನು ವಿನಾಕಾರಣ ಅಲೆದಾಡಿಸುವುದನ್ನು ತಾವು ಸಹಿಸುವುದಿಲ್ಲ. ದಾಖಲೆಗಳು ಸರಿಯಿಲ್ಲ, ಸರ್ವೆ ಸಮಸ್ಯೆ ಎಂಬಿತ್ಯಾದಿ ಕಾರಣಗಳನ್ನು ಹೇಳಿ ಇ-ಖಾತೆ ನೀಡಲು ವಿಳಂಭ ಮಾಡಲಾಗುತ್ತಿದೆ. ಎಲ್ಲಾ ಕೆಲಸಗಳು ಕಾನೂನು ಬದ್ಧವಾಗಿ ನಡೆಯಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಜೆ 5.30 ಗಂಟೆವರೆಗೆ ಕಚೇರಿಯಲ್ಲಿದ್ದು ಕೆಲಸ ಮಾಡಬೇಕು. ಕಚೇರಿಗಳಿಗೆ ಜನರು ಕೆಲಸವಾಗಿಲ್ಲವೆಂದು ಅಲೆದಾಡಬಾರದು ಅಧಿಕಾರಿಗಳು ಸಮಯಪ್ರಜ್ಞೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಾಗುವಳಿ ಚೀಟಿಗಾಗಿ ರೈತರು ಸಲ್ಲಿಸಿರುವ 50 ಮತ್ತು 53 ನಮೂನೆಗಳನ್ನು ಮಾತ್ರ ಇತ್ಯರ್ಥಪಡಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಎಲ್ಲಾ ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಲಾಗುವುದು. ನಮೂನೆ ೫೭ರ ಅರ್ಜಿಗಳ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಆ ಸ್ಥಳಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುವುದೋ ಅಥವಾ ಜಾನುವಾರುಗಳಿಗೆ ಮೀಸಲಿಡುವುದೋ ಎಂಬ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಮಾಕಳಿ ತೊರೆಗೆ ಚೆಕ್ ಡ್ಯಾಂ ನಿರ್ಮಿಸುವಂತೆ ಗ್ರಾಮಸ್ಥರಿಂದ ಬಂದ ಅರ್ಜಿಯ ಸಂಬಂಧ ಚೆಕ್ ಡ್ಯಾಂ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸುವಂತೆ ಶಾಸಕರು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಕೊಟ್ರೇಶ್ ಅವರಿಗೆ ಸೂಚಿಸಿದರು. ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಜಮೀನುಗಳ ಸರ್ವೆ, ರಸ್ತೆ ನಿರ್ಮಾಣ, ಹಾಗೂ ಸ್ಮಶಾನಕ್ಕೆ ಜಾಗ ಗುರುತಿಸುವಿಕೆ, ಅತಿಕ್ರಮಣ ತೆರವುಗೊಳಿಸುವುದು, ಹಕ್ಕುಪತ್ರ, ಮಾಸಾಶನ, ಆಸ್ಪತ್ರೆ, ವೈದ್ಯರ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಅಹವಾಲುಗಳು ಸಲ್ಲಿಕೆಯಾದವು.
ಸಭೆಯಲ್ಲಿ ರಾಮನಗರ ತಹಸೀಲ್ದಾರ್ ಬಿ.ತೇಜಸ್ವಿನಿ, ತಾಪಂ ಇಒ ಪ್ರದೀಪ್, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಬಿಇಒ ಪಾರ್ವತಮ್ಮ, ತಾಪಂ ಮಾಜಿ ಅಧ್ಯಕ್ಷ ರಾದ ಡಿ.ಎಂ.ಮಹದೇವಯ್ಯ, ಎಸ್.ಪಿ.ಜಗದೀಶ್, ದೊಡ್ಡಗಂಗವಾಡಿ ಗ್ರಾಪಂ ಅಧ್ಯಕ್ಷ ಹನುಮಂತಯ್ಯ, ಅಕ್ಕೂರು ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.