News Karnataka Kannada
Saturday, April 27 2024
ರಾಮನಗರ

ರಾಮನಗರ: ಕಲಿಕಾ ಹಬ್ಬ- ಮಕ್ಕಳು ಮುಕ್ತವಾಗಿ ಅಭಿವ್ಯಕ್ತಿಸಲು ವೇದಿಕೆ

Learning Festival is a platform for children to express themselves freely.
Photo Credit : By Author

ರಾಮನಗರ: ಕಲಿಕಾ ಹಬ್ಬ ಕಾರ್ಯಕ್ರಮವು ವಿಶಿಷ್ಟವಾದ ಕಲ್ಪನೆ ಮತ್ತು ಆಲೋಚನೆಯಿಂದ ಕೂಡಿದ್ದು ಮಕ್ಕಳು ಮುಕ್ತವಾಗಿ ಮಾತನಾಡಲು, ಅಭಿವ್ಯಕ್ತಿಸಲು ವಿಶೇಷ ವೇದಿಕೆಯನ್ನು ಕಲ್ಪಿಸಿದಂತಾಗಿದೆ ಎಂದು ಅಂತರಾಷ್ಟ್ರೀಯ ಮಟ್ಟದ ಜನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ತಿಳಿಸಿದರು.

ಬಿಡದಿ ಹೋಬಳಿ ಗಾಣಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಕಲಿಕಾ ಚೇತರಿಕೆ ವರ್ಷ-2022ರಡಿ ಆಯೋಜಿಸಿದ್ದ ಬನ್ನಿಕುಪ್ಪೆ(ಬಿ) ಕ್ಲಸ್ಟರ್ ಹಂತದ ಎರಡು ದಿನಗಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಯಾರು ಮಾಡುವುದು ಪ್ರಸ್ತುತವಾಗಿದೆ. ಅದರಲ್ಲೂ ಗ್ರಾಮೀಣ ಸೊಗಡಿನ ಕಲಿಕೆಗಳು ಈ ನೆಲದ ಸಂಸ್ಕೃತಿಯನ್ನು ಸಾರಲಿದ್ದು ಮಕ್ಕಳಲ್ಲಿ ವ್ಯಕ್ತಿ ವಿಕಸನಕ್ಕೂ ಕಾರಣವಾಗಲಿವೆ. ಕಲಿಕಾ ಹಬ್ಬದಲ್ಲಿ ಮಾಡು-ಆಡು, ಕಾಗದ-ಕತ್ತರಿ, ಊರು-ಸುತ್ತೋಣ ಹಾಗೂ ಅಕ್ಷರದಾಟ ಎಂಬ ನಾಲ್ಕು ಕಲಿಕಾ ಕಾರ್ನರ್‌ಗಳ ಮೂಲಕ ವಿಶೇಷ ವ್ಯವಸ್ಥೆ ಸೃಷ್ಠಿಸಿ ಕಲಿಕೆಗೆ ಪ್ರೋತ್ಸಾಹಿಸುವುದು ಅರ್ಥಪೂರ್ಣವಾಗಿದೆ ಎಂದು ಪ್ರಶಂಸಿಸಿದರು.

ಸಿಆರ್‌ಪಿ ಚಿಕ್ಕವೀರಯ್ಯ ಮಾತನಾಡಿ, ಕಲಿಕಾ ಹಬ್ಬವು ವಿದ್ಯಾರ್ಥಿಗಳ ಆಲೋಚನೆ ಮತ್ತು ಅನುಭವಿಸುವಿಕೆಗೆ ಉತ್ತಮ ವೇದಿಕೆಯಾಗಿದೆ. ಮಕ್ಕಳ ಕಲರವ ಹಾಗೂ ಸಂಭ್ರಮ ಸಡಗರದಿಂದ ಕೂಡಿರುವ ಕಲಿಕಾ ಹಬ್ಬ ಕಾರ್ಯಕ್ರಮದಿಂದ ಇಡೀ ಗಾಣಕಲ್ ಗ್ರಾಮವು ಊರ ದೀಪಾವಳಿ ಹಬ್ಬದ ಸ್ವರೂಪ ಪಡೆದುಕೊಂಡಿದೆ. ಸುತ್ತಲಿನ ವ್ಯವಸ್ಥೆಯನ್ನು ಮಕ್ಕಳು ಗ್ರಹಿಸಿ ವೈಶಿಷ್ಠತೆಯ ಚಿಂತನೆಗೆ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಶ್ರೇಷ್ಠತೆ ಮತ್ತು ವಿಶಿಷ್ಠ ಕಾರ್ಯಕ್ರಮವನ್ನು ನೀಡಿದ ಇಲಾಖೆಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.

ಬನ್ನಿಕುಪ್ಪೆ(ಬಿ)ಕ್ಲಸ್ಟರ್ ಕಲಿಕಾ ಹಬ್ಬದ ಅಂಗವಾಗಿ ಸರಕಾರಿ ಶಾಲೆಯ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಪೂರ್ಣಕುಂಭ ಹಾಗೂ ನಾನಾ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದ ವೇದಿಕೆಯನ್ನು ತೆಂಗಿನ ಗರಿ, ಬಾಳೆಕಂಬ, ಕಬ್ಬಿನ ಜಲ್ಲೆ ಹಾಗೂ ನಾನಾ ಹೂವುಗಳಿಂದ ಸಂಪೂರ್ಣ ಪರಿಸರ ಸ್ನೇಹಿಯಾಗಿ ಸಿಂಗರಿಸಲಾಗಿತ್ತು. ನೇಗಿಲು, ವಾಡೆ ಸಾಲು, ಮೂಡೆ ಸಾಲುಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ಕಲಿಕಾ ಹಬ್ಬದಲ್ಲಿ ಬನ್ನಿಕುಪ್ಪೆ(ಬಿ) ಕ್ಲಸ್ಟರ್ ವ್ಯಾಪ್ತಿಯ ೧೫ ಶಾಲೆಗಳಿಂದ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ 4 ರಿಂದ 9 ನೇ ತರಗತಿಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತಿಥಿಗಳೆಲ್ಲರಿಗೂ ಪುಸ್ತಕ ಹಾಗೂ ಮಲ್ಲಿಗೆ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬನ್ನಿಕುಪ್ಪೆ(ಬಿ) ಗ್ರಾಪಂ ಉಪಾಧ್ಯಕ್ಷ ರೇವಣಸಿದ್ಧಯ್ಯ, ಗ್ರಾಪಂ ಸದಸ್ಯರಾದ ಹೊಂಬೇಗೌಡ, ದೇವರಾಜು, ಮುಖ್ಯಶಿಕ್ಷಕರಾದ ಬಸವರಾಜು, ಕೃಷ್ಣಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಶಂಕರಯ್ಯ, ಸಹಶಿಕ್ಷಕರಾದ ವಿಜಯ್, ಪ್ರಭಾವತಿ, ಬಸವರಾಜು, ರಮೇಶ್, ವೆಂಕಟೇಶ್, ಕಮಲ, ಶಾಂತ, ಶಕುಂತಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು