ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿನಿ ಎಸ್.ಆರ್.ಪವಿತ್ರಾ ಕಲಬುರಗಿಯಲ್ಲಿ ಜರುಗಿದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ “ಸುಸ್ಥಿರ ನಿರ್ವಹಣೆಗಾಗಿ ದಿನನಿತ್ಯ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು” ವಿಷಯ ಕುರಿತಂತೆ ವಿಷಯ ಮಂಡನೆ ಮಾಡಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ “ಬಾಲ ವಿಜ್ಞಾನಿ” ಪಟ್ಟಕ್ಕೇರಿದ್ದಾಳೆ.
ಇದೇ ತಿಂಗಳು 26 ಮತ್ತು 27 ರಂದು ಗುಜರಾತಿನ ಅಹಮದಾಬಾದ್ ನಲ್ಲಿ ಜರುಗುವ 30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಗುವ ಮೂಲಕ ಗ್ರಾಮೀಣ ಮಕ್ಕಳೂ ಸಹ ಯಾವುದೇ ಹಿಂಜರಿರಿಕೆಯಿಲ್ಲದೆ ವಿಜ್ಞಾನಿಗಳು ಆಗಬಹುದೆಂಬುದನ್ನು ಸಾಧಿಸಿ ತೋರಿದ್ದಾಳೆ. ಶೀಳನೆರೆ ಗ್ರಾಮದ ನಿಂಬೆಹಣ್ಣಿನ ವ್ಯಾಪಾರಿ ರಮೇಶ್ ಮತ್ತು ಗೀತಾರವರ ಎರಡನೆಯ ಪುತ್ರಿಯಾದ ಈಕೆ ಸಣ್ಣ ವಯಸ್ಸಿನಲ್ಲಿಯೇ ಬಾಲ ವಿಜ್ಞಾನಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯ ಈ ವರ್ಷ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿ ಕೊಳ್ಳೋಣ ಎಂಬ ಕೇಂದ್ರ ವಿಷಯವನ್ನಾಗಿ ಆಯ್ದುಕೊಂಡು ಮತ್ತು ” ಪರಿಸರ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಅಭ್ಯಾಸಗಳು” ಎಂಬ ಉಪ ಶೀರ್ಷಿಕೆಯೊಂದಿಗೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಅಯೋಜನೆ ಮಾಡಿದೆ.
ಈ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಯಾವುದಾದರೂ ಒಂದು ಊರನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಪರಿಸರ ಕುರಿತಂತೆ ಮಾಹಿತಿ ಕಲೆ ಹಾಕಿ ನಂತರ ವಿಷಯ ಮಂಡನೆಯಾಗಿರುವ ಕಾರಣ ಈಕೆ ತನ್ನ ಸಹವರ್ತಿ ವರಲಕ್ಷ್ಮಿ ಜೊತೆಗೂಡಿ ಕಳೆದ ಎರಡು ತಿಂಗಳಿನಿಂದ ಶೀಳನೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯ ಕುರಿತಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಜ.9 ರಂದು ಪಾಂಡವಪುರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಇದೇ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸೌಮ್ಯರವರ ಮಾರ್ಗದರ್ಶನ ಹಾಗೂ ಮುಖ್ಯ ಶಿಕ್ಷಕರ- ಸಹ ಶಿಕ್ಷಕರುಗಳ ಸಹಕಾರದಿಂದ ಈ ಅಪರೂಪದ ಸಾಧನೆಗೈದಿದ್ದಾಳೆ.