ರಾಮನಗರ: ಪಂಚರತ್ನ ರಥಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಿರುವುದು ಪಾಪದ ಹಣದಿಂದ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬೇನಾಮಿ ಹೆಸರಿನಲ್ಲಿ ಕುಮಾರಸ್ವಾಮಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಎಂದು ಆರೋಪಿಸಿದರಲ್ಲದೆ, ಆ ಹಣದಿಂದ ಪಂಚರತ್ನ ರಥಯಾತ್ರೆಗೆ ಬಸ್ಗಳಲ್ಲಿ ಜನರನ್ನು ಕರೆತರಲಾಗಿದೆ. ನಿಖಿಲ್ ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದಾಗಲೆಲ್ಲಾ ಚನ್ನಪಟ್ಟಣಕ್ಕೆ 1500 ಕೋಟಿ ಅನುದಾನ ತರಲಾಗಿದೆ ಎಂದು ಹೇಳುತ್ತಾರೆ. ಆದರೆ, ಆ ಹಣದಲ್ಲಿ ಒಂದಿಬ್ಬರು ಗುತ್ತಿಗೆದಾರರ ಹೆಸರಿನಲ್ಲಿ ಕುಮಾರಸ್ವಾಮಿಯವರೇ ಬೇನಾಮಿಯಾಗಿ ಕಾಮಗಾರಿಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಶಾಸಕರಾದ ಮೇಲೆ ಚನ್ನಪಟ್ಟಣದಲ್ಲಿ ಒಂದೇ ಒಂದು ನಿವೇಶನ ಮತ್ತು ಮನೆ ಹಂಚಿಲ್ಲ. ನನ್ನ ಶ್ರಮದ ಫಲವಾಗಿ ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳು ಮಂಜೂರಾಗಿವೆ. ಈಗಾಗಲೇ ಪಂಚಾಯಿತಿಯಿಂದ ಅನುಮೋದನೆ ದೊರೆತ್ತಿದ್ದು, ಗ್ರಾಪಂಗಳಲ್ಲಿ ಮನೆ ಹಂಚಿಕೆ ಮಾಡುವ ಕೆಲಸ ಮಾಡಲಾಗುವುದು. ಚನ್ನಪಟ್ಟಣದ ಕೂಡ್ಲೂರು ಗ್ರಾಮದಲ್ಲಿ ನಿವೇಶನ ಮಂಜೂರು ಮಾಡಿದ್ದೇನೆ ಎಂದು ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ. ಆದರೆ, ನಿವೇಶನ ರಹಿತರಿಗಾಗಿ ಜಮೀನು ಖರೀದಿಸಿದ್ದು, ನನ್ನ ಅವಧಿಯಲ್ಲಿ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಜಿಲ್ಲೆಯ ಒಬ್ಬ ಮುಖಂಡರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಕಾರ್ಯಕರ್ತರನ್ನು ಅವರ ಮನೆಯ ಒಳಗಡೆ ಬಿಟ್ಟುಕೊಳ್ಳುತ್ತಿರಲಿಲ್ಲ. ಜಿಲ್ಲೆಯ ಜನರನ್ನು ಕುಮಾರಸ್ವಾಮಿ ಗುಲಾಮರಂತೆ ನೋಡುತ್ತಾರೆ. ಸ್ತ್ರೀಶಕ್ತಿ ಸಾಲವನ್ನು ಮನ್ನಾ ಮಾಡುತ್ತೇನೆಂಬ ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದ. ಕಳೆದ ಚುನಾವಣೆಯಲ್ಲಿಯೂ ಈ ಭರವಸೆ ನೀಡಿದ್ದರು ಆದರೆ ಸಿಎಂ ಆದ ಬಳಿಕ ಏಕೆ ಮನ್ನಾ ಮಾಡಿಲ್ಲ ಎಂದು ಪ್ರಶ್ನಿಸಿದರು. ಅವರ ಉಡಾಫೆ ಮಾತುಗಳನ್ನು ಯಾರೂ ನಂಬಬಾರದು ಎಂದು ತಿಳಿಸಿದರು.
ಆರ್ಟಿಐ ಕಾಯಿದೆಯನ್ನು ತೆಗೆದುಹಾಕಿದ ಕುಮಾರಸ್ವಾಮಿ ಗ್ರಾಮೀಣ ಭಾಗದ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬಹುದಾಗಿದ್ದ ಅವಕಾಶವನ್ನು ಕಿತ್ತುಕೊಂಡರು. ಇನ್ನು ಪಂಚರತ್ನ ಯೋಜನೆ ಮೂಲಕ ಅವರು ಮಕ್ಕಳಿಗೆ ಗಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಜೆಡಿಎಸ್ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಸಿಂ.ಲಿಂ.ನಾಗರಾಜು ಅವರು ನಿಧನರಾದಾಗ ಅವರಿಗೆ ಪುಷ್ಪಹಾರ ಹಾಕಿ ಗೌರವ ತೋರಿಸಿಲ್ಲ. ರಥಯಾತ್ರೆ ವೇಳೆ ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಹಾರ ಹಾಕದೇ ಅಗೌರವ ತೋರಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಕೈಜೋಡಿಸಿ ದಲಿತ ಮತಗಳನ್ನು ಬಾಚಿಕೊಂಡಿದ್ದರು. ಅಲ್ಲದೆ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಮತ ಹಾಕಿಸಿಕೊಂಡರು. ಆದರೆ ಮುಂದಿನ ಚುನಾವಣೆಯಲ್ಲಿ ಇದೆಲ್ಲಾ ನಡೆಯೋದಿಲ್ಲ. ಜಿಲ್ಲೆಯ ಜನರು ಪ್ರಜ್ಞಾವಂತರಿದ್ದು ಕುಮಾರಸ್ವಾಮಿ ಅವರ ಮಾತಿಗೆ ಸೊಪ್ಪು ಹಾಕುವುದಿಲ್ಲ ಎಂದರು.
ಬಿಜೆಪಿ ನನಗೆ ಯಾವುದೇ ರೀತಿಯ ಮೋಸ ಮಾಡಿಲ್ಲ. ಚುನಾವಣೆಯಲ್ಲಿ ಸೋತರು ಕೂಡ ಪಕ್ಷ ನನ್ನನ್ನು ಕೈ ಬಿಡಲಿಲ್ಲ. ನನ್ನನ್ನು ಎಂಎಲ್ಸಿ ಮಾಡಿ ಮಂತ್ರಿ ಸ್ಥಾನ ನೀಡಿತ್ತು. ಈಗ ಸಚಿವ ಸ್ಥಾನ ನೀಡುವುದು ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನನಗೆ ಬಿಜೆಪಿಯೇ ಮಾತೃ ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದರು.
ಗೋಷ್ಠಿಯಲ್ಲಿ ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಬಿಜೆಪಿ ಜಿಲ್ಲಾಧ್ಯP ಹುಲುವಾಡಿ ದೇವರಾಜು,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು ಮುಂತಾದವರು ಉಪಸ್ಥಿತರಿದ್ದರು.