ರಾಮನಗರ: ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ರಸ್ತೆಗಳು, ಸೇತುವೆ ಹಾಗೂ ಬೆಳೆಗಳು ಕೊಚ್ಚಿಹೋಗಿದ್ದು ಮತ್ತೊಮ್ಮೆ ಸೃಷ್ಟಿಯಾದ ಮಳೆ ಅವಾಂತರಕ್ಕೆ ಜನ ಪರದಾಡುವಂತಾಗಿದೆ.
ಕುಂಭದ್ರೋಣ ಮಳೆಗೆ ರಸ್ತೆಗಳು ಹೊಳೆಯಾಗಿ ಮಾರ್ಪಾಟ್ಟಾಗಿವೆ. ಹಲವೆಡೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಕೆರೆ-ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು ಕೆಲವು ಕಡೆ ಸೇತುವೆಗಳ ಮೇಲ್ಬಾಗ ನೀರು ಹರಿದು ಅಪಾಯದ ಮಟ್ಟಕ್ಕೂ ತಲುಪಿ ಜನರಲ್ಲಿ ಆತಂಕ ಮೂಡಿಸಿವೆ.
ಎಡೆಬಿಡದೆ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ತೋಟ-ಹೊಲಗಳಿಗೆ ನುಗ್ಗಿ ಸಂಕಷ್ಟ ತಮದೊಡ್ಡಿದೆ. ಬೆಳೆದ ಬೆಳೆಗಳ ಫಸಲು ನೀರಿನಲ್ಲಿ ಕೊಚ್ಚಿಹೋಗಿ ರೈತರಿಗೆ ನಷ್ಟವನ್ನುಂಟು ಮಾಡಿದೆ. ಕೆರೆ-ಕಟ್ಟೆಗಳಿಗೆ ನೀರಿನ ಒಳಹರಿವು ಬರುತ್ತಿರುವುದರಿಂದ ಹಳ್ಳಗಳು ಮೈದುಂಬಿ ಹರಿಯುತ್ತಿವೆ. ರೈತರು ಜಾನುವಾರುಗಳಿಗೆ ಮೇವು ತರಲು ಹಾಗೂ ಹಾಲು ಡೇರಿಗೆ ಹಾಕಲು ಪರದಾಡುವಂತಾಯಿತು.
ರಾಮನಗರದ ಬಸವನಪುರ ಸಮೀಪದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ಬಳಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲಲ್ಲಿ ಸರ್ವಿಸ್ ರಸ್ತೆಗಳು ಹದಗೆಟ್ಟಿರುವ ಕಾರಣ ಬೆಂಗಳೂರು-ಮೈಸೂರು ದಶಪಥದ ಬೈಪಾಸ್ ಹೆದ್ದಾರಿಯಲ್ಲಿ ನಿಡಘಟ್ಟದ ಬಳಿಯಿಂದ ಬಿಡದಿ ಹೋಬಳಿ ಹೆಜ್ಜಾಲದವರೆಗೆ ಆರು ಪಥದ ರಸ್ತೆಯನ್ನು ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಬಿಡದಿಯ ಕೇತುಗಾನಹಳ್ಳಿ ಮತ್ತು ವಾಜರಹಳ್ಳಿ ಕೆರೆಗಳಿಗೆ ಅಧಿಕ ಪ್ರಮಾಣದ ಮಳೆ ನೀರು ಹರಿದು ಬಂದ ಪರಿಣಾಮ ಕೆರೆ ಜಾಗ ಮಾತ್ರವ್ಲಲದೆ ಖಾಸಗಿಯವರ ಜಮೀನುಗಳನ್ನೂ ಆವರಿಸಿಕೊಂಡಿತ್ತು. ವಾಜರಹಳ್ಳಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯ ಜಲಾವೃತವಾಗಿದ್ದು ಭಾರಿ ಪ್ರಮಾಣದ ನೀರು ಏಕಾಏಕಿ ಹರಿದು ಕೋಡಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಅಲ್ಲದೆ ನೀರು ಹಳ್ಳದ ಬದಗಳನ್ನು ಒಡೆದುಕೊಂಡು ತೋಟಗಳಿಗೆ ನುಗ್ಗಿ ಬೆಳೆಗಳ ನಾಶ ಮಾಡಿದ್ದು ಎಲ್ಲವೂ ನೀರಿನಿಂದ ಆವೃತವಾಗಿದೆ.
ತಾಲ್ಲೂಕಿನ ಶೇಷಗಿರಿಹಳ್ಳಿ ಕೆರೆ ತುಂಬಿ ಅತ್ಯಧಿಕ ನೀರು ಪ್ರವಾಹ ಬಂದ ಪರಿಣಾಮ ಐನೋರಪಾಳ್ಯ ಗ್ರಾಮದಲ್ಲಿ ಸಂಪರ್ಕ ಸೇತುವೆ ಕೊಚ್ಚಿಹೋಗಿದೆ. ಹೆಜ್ಜಾಲದ ಹೊಸಕೆರೆ ಭರ್ತಿಯಾಗಿ ಕೋಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಶೇಷಗಿರಿಹಳ್ಳಿ ಕೆರೆಗೆ ಬಂದಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೆ ನಿರ್ಮಾಣದ ವೇಳೆ ಈ ಕೆರೆಯ ಕೋಡಿಯನ್ನು ಮುಚ್ಚಿದ ಕಾರಣ ಐನೋರಪಾಳ್ಯದ ಸಂಪರ್ಕ ಸೇತುವೆ ಪ್ರವಾಹಕ್ಕೆ ಆಹುತಿಯಾಗಿದೆ. ಶೇಷಗಿರಿಹಳ್ಳಿ ಹೈವೆ ಟೋಲ್ ಪ್ರದೇಶ ಕೆರೆಯಾಗಿ ಮಾರ್ಪಟ್ಟಾಗಿತ್ತು. ಬೆಳಗಿನ ಜಾವ ಜೆಸಿಬಿ ಯಂತ್ರಗಳಿಂದ ಕಾಂಕ್ರಿಟ್ ಚರಂಡಿಗಳನ್ನು ತೆರವುಗೊಳಿಸಿ ಹಳ್ಳದಲ್ಲಿ ನೀರು ಹರಿಸಿ ಖಾಲಿ ಮಾಡಲಾಯಿತು.
ಬೆಂಗಳೂರು ಭಾಗದಲ್ಲಿ ಭಾರಿ ಮಳೆ ಸುರಿದ ಪರಿಣಾಮ ವೃಷಭಾವತಿ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿದೆ. ವೃಷಭಾವತಿ ನದಿಯಲ್ಲಿ ಪ್ರವಾಹ ಬಂದಿದ್ದು ನದಿಪಾತ್ರದ ಪ್ರದೇಶಗಳಿಗೆ ನೀರು ನುಗ್ಗಿದೆ. ಬಿಡದಿ ಹೋಬಳಿ ನೆರೆ ಹಾವಳಿ ಪ್ರದೇಶಗಳಿಗೆ ಶಾಸಕ ಎ.ಮಂಜುನಾಥ್ ಅವರು ಭೇಟಿ ನೀಡಿ ಸ್ಥಳಿಯರಿಂದ ಮಾಹಿತಿ ಪಡೆದರು. ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರವೇ ಸೂಕ್ತ ಪರಿಹಾರ ಕಲ್ಪಿಸುವಂತೆ ತಾಕೀತು ಮಾಡಿದರು. ಪುರಸಭೆ ಸದಸ್ಯರಾದ ಆರ್.ದೇವರಾಜು, ಸೋಮಶೇಖರ್ ಸೇರಿದಂತೆ ಮುಖಂಡರು ಹಾಜರಿದ್ದರು.