ರಾಮನಗರ: ಬಿಜೆಪಿ ವಸೂಲಿ ಪಕ್ಷವಾಗಿದ್ದು ಅದರ ನಾಯಕರು ಕಾಂಗ್ರೆಸ್ ದಿವಾಳಿತನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ತಾಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ಬೆತ್ತಂಗೆರೆ ಗ್ರಾಮದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಆ ಪಕ್ಷದ ನಾಯಕರಿಂದ ಕಾಂಗ್ರೆಸ್ಸಿಗರು ಪಾಠ ಕಲಿಯಬೇಕಾಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗುವ ಹಾಗೂ ಪಕ್ಷಕ್ಕೆ ಶಕ್ತಿ ತುಂಬಬಲ್ಲ ಯಾರೇ ಆಗಿರಲಿ ಆ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಬರಲೆಂದು ಆಹ್ವಾನ ನೀಡಿದ್ದೇವೆ. ಯಾರು ಆಸಕ್ತರಿದ್ದಾರೆ ಅವರನ್ನು ಪಕ್ಷ ಸ್ವಾಗತಿಸುತ್ತದೆ. ಪಕ್ಷಕ್ಕೆ ಅರ್ಜಿ ಹಾಕಿ ಎಂದಷ್ಟೇ ಹೇಳಿದ್ದೇವೆ. ಆ ನಂತರ ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿರುವ ಸಮಿತಿ ಯಾರು ಸೂಕ್ತ ಎಂಬುದನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.
ಆ ಸಮಿತಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರ ನಾಯಕರು ಇರುತ್ತಾರೆ. ಇಲ್ಲಿ ಪಕ್ಷ ಸಂಘಟನೆ ಉದ್ದೇಶವೇ ಹೊರತು ಯಾವ ನಾಯಕರ ಪ್ರತಿಷ್ಠೆ ಪ್ರಶ್ನೆ ಏನೂ ಇಲ್ಲ. ಪಕ್ಷ ಬೆಳೆಯಬೇಕು, ಬಿಜೆಪಿಯ ದುರಾಡಳಿತ ತೊಲಗಿಸಲು ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಖರ್ಗೆ ಅವರ ನಿರಂತರ ಹೋರಾಟ ಮತ್ತು ಪರಿಶ್ರಮ ಫಲ ಅವರಿಗೆ ಶಕ್ತಿ ನೀಡಿದೆ. ಖರ್ಗೆ ರವರು ಅಧ್ಯಕ್ಷರಾಗಿರುವುದು ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಎದುರಿಸಲು ಪಕ್ಷ ಸದೃಢವಾಗಿದೆ. ಎಲ್ಲಾ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಬನ್ನಿಕುಪ್ಪೆ(ಬಿ) ಗ್ರಾಪಂ ಅಧ್ಯಕ್ಷೆ ಸಮತಿ ನಾಗರಾಜು, ಉಪಾಧ್ಯಕ್ಷ ರೇವಣಸಿದ್ದಯ್ಯ ಹಾಗೂ ಸದಸ್ಯರು. ತಾಪಂ ಮಾಜಿ ಅಧ್ಯಕ್ಷರೂ ಆದ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ರಮೇಶ್, ಬಿಡದಿ ಆರ್ಎಸ್ಎಸ್ಎನ್ ನಿರ್ದೇಶಕರಾದ ಮಹೇಶ್, ಆನಂದ್, ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಯು.ನರಸಿಂಹಯ್ಯ, ಗೋಪಾಲರಾಜ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.