ರಾಮನಗರ: ಕುಮಾರಸ್ವಾಮಿ ಅವರಿಗೆ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದ್ದು, ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ. ಸಾಮಾನ್ಯ ವೈದ್ಯರಿಗೇ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಅಷ್ಟು ಮಾಹಿತಿ ಇರಲ್ಲ. ಇನ್ನೂ ಇದರ ಬಗ್ಗೆ ಸಾಮಾನ್ಯ ಜನಕ್ಕೆ ಹೇಗೆ ಗೊತ್ತಾಗುತ್ತೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ ವಿಚಾರ ಕುರಿತು ಅವರು ಮಾತನಾಡಿದ್ದಾರೆ. ಹೆಚ್ಡಿಕೆಗೆ ಆಪರೇಷನ್ ಮಾಡುವಾಗ ನಾನೂ ಇದ್ದೆ. ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು 13 ವರ್ಷ ಓದಬೇಕು. ಕುಮಾರಸ್ವಾಮಿ ಅವರಿಗೆ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದೆ. ಜ್ಞಾನಿಗಳು ಜ್ಞಾನಿಗಳಾಗೆಯೇ ಇರಬೇಕು, ಇನ್ನೊಂದು ಆಗಬಾರದು ಎಂದು ಕಾಂಗ್ರೆಸ್ ಶಾಸಕನಿಗೆ ತಿರುಗೇಟು ನೀಡಿದ್ದಾರೆ.
ಏಪ್ರಿಲ್ 2 ರಂದು ನಡೆಯಲಿರುವ ಅಮಿತ್ ಶಾ ರೋಡ್ ಶೋ ಬಗ್ಗೆ ಮಾತನಾಡಿದ ಮಂಜುನಾಥ್, ಅಮಿತ್ ಶಾ ಅವರು ಪ್ರಥಮಬಾರಿಗೆ ಚುನಾವಣಾ ಪ್ರಚಾರಕ್ಕೆ ಬರುತ್ತಿಒದ್ದಾರೆ. ರೋಡ್ ಶೋ ರೂಪದಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿದ್ದು ಅದನ್ನ ಮುಗಿಸಿಕೊಂಡು ಬರುತ್ತಾರೆ. ಅವರ ಬರುವಿಕೆ ನಮಗೆ ಹೊಸ ಶಕ್ತಿ ತುಂಬಲಿದೆ. ಇದು ನನ್ನ ಗೆಲುವಿಗೆ ಮತ್ತಷ್ಟು ವಿಶ್ವಾಸ ಮೂಡಲಿದೆ ಎಂದಿದ್ದಾರೆ.
ಏಪ್ರಿಲ್ 4ರಂದು ನಾನು ನಾಪಪತ್ರ ಸಲ್ಲಿಸುತ್ತೇನೆ. ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಮೆರವಣಿಗೆ, ಸಮಾವೇಶದ ಕುರಿತು ರೂಪುರೇಷೆ ಮಾಡಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕೊಡುತ್ತೇವೆ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.