ರಾಮನಗರ: ಕಾಂಗ್ರೆಸ್ಸಿಗರು ಜನರಿಗೆ ಭರವಸೆಯ ಗ್ಯಾರಂಟಿ ಕಾರ್ಡ್ ನೀಡುವುದರಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕುರಿತ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣಗೌಡ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗಾಗಿ 1979 ರಿಂದ ಪರಿಷ್ಕರಣೆಗಳು ಹಾಗೂ ಹೋರಾಟಗಳು ಹಾಗೂ ನಡೆಯುತಾ ಬಂದಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತಬ್ಯಾಂಕ್ ಗಾಗಿಯೇ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಅದರಲ್ಲೂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವರದಿ ತಯಾರಿಸಲು 116 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಆದರೆ ಶೋಷಿತರಿಗೆ ಮೀಸಲಾತಿ ಹಕ್ಕು ದೊರಕಿಸಿಕೊಡಲಾಗಲಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕೆಲಸ ಆಗಿದೆ. 107ಶೋಷಿತ ಸಮುದಾಯಗಳಿಗೆ ಒಳ ಮೀಸಲಾತಿ ಅನುಕೂಲವನ್ನು ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದಿಟ್ಟ ನಿರ್ಧಾರವನ್ನು ರಾಜ್ಯದ ಹಲವು ತಜ್ಞರು ಪ್ರಶಂಸಿಸಿದ್ದಾರೆ. ಅನೇಕ ವಿಚಾರವಾದಿಗಳು ಸ್ವಾಗತಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಸೀಮಿತವಲ್ಲ, ಎಂದಿಗೂ ಅಭಿವೃದ್ಧಿ ಪರ ಎಂಬುದನ್ನು ಸಾಬೀತು ಪಡಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಕೆಲವು ಭರವಸೆಗಳ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿ ನುಡಿದಂತೆ ನಡೆದು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ರಾಜ್ಯದಲ್ಲಿ 11 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಸೌಲಭ್ಯ ನೀಡಿದೆ. 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿದೆ. 11500 ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗ ಭರವಸೆ ನೀಡಿ ನೇರ ನೇಮಕ ಮಾಡಿಕೊಂಡಿದೆ. ಹೀಗಾಗಿ ಬಿಜೆಪಿ ಜನರ ವಿಶ್ವಾಸದಲ್ಲಿ ಮುನ್ನೆಡೆಯುತ್ತಿದೆ ಎಂದು ನುಡಿದರು.
ರಾಮನಗರದ ಅರ್ಚಕರಹಳ್ಳಿ ಸಮೀಪ ಸ್ಥಾಪಿಸಲು ಉದ್ದೇಶಿಸಿರುವ ರಾಜೀವಗಾಂಧಿ ಆರೋಗ್ಯ ವಿವಿ ನಿರ್ಮಾಣ ಕಾಮಗಾರಿಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಹಿಂದೆ ಎರಡು ಬಾರಿ ಪೂಜೆ ಆಗಿದ್ದರೂ ಸಹ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಡಿಪಿಆರ್ ಸಿದ್ಧವಾಗಿದ್ದು ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಹೀಗಾಗಿ ಕೇಂದ್ರ ಸಚಿವ ಡಾ.ಮನ್ಸುಖ್ ಎಲ್ ಮಾಂಡವಿಯಾ ಅವರು ಆರೋಗ್ಯ ವಿವಿಗೆ ಶಂಕುಸ್ಥಾಪನೆ ನೆರವೇರಿಸಿಲಿದ್ದು ಮುಖ್ಯಮಂತ್ರಿಗಳು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಅಶ್ವಥ ನಾರಾಯಣಗೌಡ ಮಾಹಿತಿ ನೀಡಿದರು.
ರಾಮನಗರ ಜಿಲ್ಲೆಯಲ್ಲಿ ಅನೇಕ ಜಲಾಶಯಗಳಿದ್ದರೂ ಸಹ ನೀರಾವರಿ ಯೋಜನೆ ರೂಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ನೀರಾವರಿ ಕೊಡುಗೆ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ ಎಂದು ಸವಾಲು ಎಸೆದರು. ಚನ್ನಪಟ್ಟಣದ ಇಗ್ಗಲೂರು ಜಲಾಶಯದ ನೀರಾವರಿ ಯೋಜನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆ. ಜಿಲ್ಲೆಯಲ್ಲಿ ಅನುಷ್ಠಾನ ಆಗುತ್ತಿರುವ ಕುಡಿಯುವ ನೀರಿನ ಯೋಜನೆಗಳೆಲ್ಲವೂ ಬಿಜೆಪಿ ಕೊಡುಗೆ. ಬಿಡದಿಯಲ್ಲಿದ್ದ ಸಕ್ಕರೆ ಕಾರ್ಖಾನೆ ಹಾಗೂ ಕೆಲವು ಪ್ರಮುಖ ಫ್ಯಾಕ್ಟರಿ ಮುಚ್ಚಿಸಿದ್ದು ಅವರ ಕುಟುಂಬದವರ ಸಾಧನೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಮಂಡಲ ಅಧ್ಯಕ್ಷ ಪಿ.ಶಿವಾನಂದ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ರೆಡ್ಡಿ, ಬಿಜೆಪಿ ಮುಖಂಡರಾದ ಆರ್.ವಿ.ಸುರೇಶ್, ವಿ.ರಾಜು, ಸಿಂಗ್ರಯ್ಯ, ಕಾಳಪ್ಪ, ಗೋಪಾಲ್, ರಾಜಣ್ಣ, ನಾಗೇಂದ್ರ(ದಿಣ್ಣ) ಮುಂತಾದವರು ಹಾಜರಿದ್ದರು.