ರಾಮನಗರ : ಶ್ರೀ ರಾಮದೇವರ ಬ್ರಹ್ಮರಥೋತ್ಸವವು ನಗರದಲ್ಲಿ ಸಡಗರ ಸಂಭ್ರಮದಿಂದ ನೆರೆವೇರಿತು. ನೆರೆದಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ನಗರದ ಛತ್ರದ ಬೀದಿಯಲ್ಲಿ ಭಕ್ತರ ಸಂರಕ್ಷಣಾರ್ಥವಾಗಿ ನೆಲೆಸಿರುವ ಶ್ರೀ ರಾಮದೇವರಿಗೆ ರಾಮನವಮಿಯ ಮಾರನೇಯ ದಿನ ಪ್ರತಿ ವರ್ಷ ರಥೋತ್ಸವನ್ನು ಹಮ್ಮಿಕೊಳ್ಳಲಾಗುತ್ತದೆ. ಕೋವಿಡ್ ಸೋಂಕಿನಿಂದಾಗಿ ಎರಡು ವರ್ಷಗಳ ಕಾಲ ರಥೋತ್ಸವ ನಡೆದಿರಲಿಲ್ಲ. ಈ ವರ್ಷ ವಿಜೃಂಭಣೆಯಿಂದ ರಥೋತ್ಸವ ನೆರೆವೇರಿತು. ಸಾವಿರಾರು ಮಂದಿ ಭಕ್ತರು ಸೀತಾ, ಲಕ್ಷ್ಮಣ ಸಮೇತ ಶ್ರೀರಾಮ ದೇವರನ್ನು ದರ್ಶನ ಮಾಡಿ, ಬಾಳೆ ಹಣ್ಣು ಮತ್ತು ಜವನವನ್ನು ರಥಕ್ಕೆ ಎಸೆದು ತಮ್ಮ ಭಕ್ತಿ ಭಾವ ಸಮರ್ಪಿಸಿಕೊಂಡರು.
ಸುಮಾರು 40 ಅಡಿ ಎತ್ತರದ ರಥದಲ್ಲಿ ಶ್ರೀರಾಮ ದೇವರು ಸೀತಾ, ಲಕ್ಷ್ಮಣ ಸಮೇತ ವಿರಾಜಮಾನರಾಗಿದ್ದು. ಜೈ ಶ್ರೀರಾಮ್ ಎಂಬ ಘೋಷಣೆಯೊಂದಿಗೆ ನೂರಾರು ಭಕ್ತರi ಭಾಗವಹಿಸಿ ರಥವನ್ನು ಎಳೆದರು. ನಗರದ ಕಾಮಣ್ಣನ ಗುಡಿ ವೃತ್ತದಲ್ಲಿ ಭಕ್ತರಿಂದ ಪೂಜೆ ನೆರವೇರಿತು. ತದ ನಂತರ ಎಂ.ಜಿ.ರಸ್ತೆ, ಮುಖ್ಯ ರಸ್ತೆ ಹಾಗೂ ಛತ್ರದ ಬೀದಿಯಲ್ಲಿ ಸಂಚರಿಸಿದ ರಥವು ಅಗ್ರಹಾರದ ಅಭಯ ಆಂಜನೇಯಸ್ವಾಮಿ ದೇವಾಲಯದ ಮಂಭಾಗದಲ್ಲಿ ಅಂತ್ಯವಾಯಿತು.
ಶ್ರೀ ರಾಮ ರಥೋತ್ಸವದ ಅಂಗವಾಗಿ ಎಂ.ಜಿ.ರಸ್ತೆ, ಛತ್ರದ ಬೀದಿಯಲ್ಲಿ ಭಕ್ತಾಧಿಗಳು ಅರವಂಟಿಕೆಗಳನ್ನು ಏರ್ಪಡಿಸಿದ್ದರು. ಪಾನಕ, ಮಜ್ಜಿಗೆ, ಕೋಸಂಬರಿ, ಪಲಾವ್, ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ ಹೀಗೆ ಬಗೆಬಗೆಯ ತಿನಿಸುಗಳು ಭಕ್ತರ ಹಸಿವು ಮತ್ತು ದಾಹವನ್ನು ನೀಗಿಸಿತು.