ಉತ್ತರ ಪ್ರದೇಶ : ಗಾಜಿಯಾಬಾದ್ನ ಇಂದಿರಾಪುರಂ ಸಮೀಪದ ಕನವಾನಿ ಗ್ರಾಮದಲ್ಲಿರುವ ಗೋ ಶಾಲೆಯ ಸುತ್ತಮುತ್ತ ಬೆಂಕಿ ಕಾಣಿಸಿಕೊಂಡ ಪರಿಣಾಮ 36 ಹಸುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ನಡೆದಿದೆ.
ಬೆಂಕಿ ಬಹಳ ವೇಗವಾಗಿ ಹರಡಿದ್ದರಿಂದ ಗೋ ಶಾಲೆಯಲ್ಲಿದ್ದ ಸುಮಾರು 125 ಹಸುಗಳ ಪೈಕಿ 36 ಹಸುಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 100 ಗುಡಿಸಲುಗಳು ಸುಟ್ಟು ಹೋಗಿವೆ ಎನ್ನಲಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ಸಿದರು. ಆದರೂ, ಕೆಲವು ಹಸುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಇನ್ನೂ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಗುಡಿಸಲುಗಳ ನಿವಾಸಿಗಳು ಸಾಮಾನ್ಯವಾಗಿ 5 ಕೆಜಿ ಎಲ್ಪಿಜಿ ಸಿಲಿಂಡರ್ಗಳನ್ನು ಸ್ಥಳೀಯವಾಗಿ ಖರೀದಿಸಿ ಬಳಸುತ್ತಾರೆ. ಅವಘಡದ ವೇಳೆ ಇಂತಹ 12 ಎಲ್ಪಿಜಿ ಸಿಲಿಂಡರ್ಗಳು ಸ್ಫೋಟಗೊಂಡಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಬೆಂಕಿ ನಂದಿಸಲು ತುಂಬಾ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಗೋ ಶಾಲೆಯನ್ನು ಶ್ರೀಕೃಷ್ಣ ಸೇವಾ ಗೋ ಶಾಲಾ ಟ್ರಸ್ಟ್ ನಡೆಸುತ್ತಿದೆ. ಇವರ ಆಶ್ರಯದಲ್ಲಿ 100 ಕ್ಕೂ ಹೆಚ್ಚು ಹಸುಗಳು ಇದ್ದವು ಮತ್ತು ಬೆಂಕಿಯಲ್ಲಿ ಸುಮಾರು 40 ಹಸುಗಳು ಸಾವನ್ನಪ್ಪಿವೆ. ಉಳಿದ ಹಸುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿ, ಕೂಲಂಕುಷವಾಗಿ ತನಿಖೆ ನಡೆಸಿ ಆಶ್ರಯ ಮನೆ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದ್ದೇವೆ ಎಂದು ಗೋಶಾಲೆಯ ಉಸ್ತುವಾರಿ ಹಾಗೂ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಂಡಿತ್ ತಿಳಿಸಿದರು.