ರಾಮನಗರ: ಅಧಿವೇಶನದಲ್ಲೇ ಸಿದ್ದರಾಮಯ್ಯ ಅವರ ನಿಜ ಬಣ್ಣ ಬಯಲಾಗಿದೆ. ಮತಾಂತರ ನಿಷೇಧ ಕಾಯ್ದೆ ಅಸ್ತ್ರವನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್ನವರು. ಇವರು ಈ ನಾಡಿನ ಜನರಿಗೆ ರಕ್ಷಣೆ ಕೊಡ್ತಾರ? ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕ ಹಕ್ಕು ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಬಿಡದಿ ಪುರಸಭೆ ಚುನಾವಣೆ ನಿಮಿತ್ತ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಟಿ.ಬಿ.ಜಯಚಂದ್ರ ತಂದಿದ್ದ ಮತಾಂತರ ನಿಷೇಧ ಕಾಯ್ದೆ ನೋಟ್ ತಂದಿದ್ದರು.
ಅದಕ್ಕೆ ಸಿದ್ಧರಾಮಯ್ಯ ಸಹಿ ಹಾಕಿದ್ದರು. ಇಂದು ಬಿಜೆಪಿಯವರು ಮಂಡಿಸುತ್ತಿರುವ ಮತಾಂತರ ನಿಷೇಧ ಕಾಯ್ದೆ ಬಿಲ್ ಬಗ್ಗೆ ಅವರು ಯಾವ ಮುಖ ಇಟ್ಟುಕೊಂಡು ಮಾತನಾಡ್ತಾರೆ ಎಂದು ಪ್ರಶ್ನಿಸಿದರು.
ಇದೇ ಬಿಜೆಪಿಯವರು ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ನವರು ವಾಕ್ ಔಟ್ ಮಾಡಿದ್ದರು. ಅಂದು ಕಾಯ್ದೆ ವಿರುದ್ದ ಓಟು ಹಾಕಲು ನಿಂತಿದ್ದರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ನಾನು ಹೊಡದಂತೆ ಮಾಡ್ತೀನಿ, ನೀನು ಅತ್ತಂಗೆ ಮಾಡು ಎಂಬುದು ಈ ರಾಷ್ಟ್ರೀಯ ಪಕ್ಷಗಳ ಧೋರಣೆ ಎಂದು ಜರಿದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಮ್ಮ ವಿರೋಧವಿದೆ. ನಮ್ಮ ಶಾಸಕರು ಕಾಯ್ದೆ ಜಾರಿ ವಿರುದ್ದವಾಗಿ ಮತ ಹಾಕ್ತಾರೆ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಸಮುದಾಯಗಳಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ನಾವು ಕಾಂಗ್ರೆಸ್ನ ಈ ಮಹಾನ್ ನಾಯಕರಿಂದ ಕಲಿಯಬೇಕಾಗಿಲ್ಲ. 2023ರ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂದು ಜನ ತೋರಿಸುತ್ತಾರೆ ಎಂದರು.
ಕಾಂಗ್ರೆಸ್ ನಾಯಕರು ಈಗಾಗಲೆ ಅಧಿಕಾರ ಹಿಡಿದೆಬಿಟ್ಟಿದ್ದೇವೆ ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಆಕಾಶದೆತ್ತರಕ್ಕೆ ಹೋಗಿಬಿಟ್ಟಿದ್ದಾರೆ ಆದರೆ ಜನರೇ ಇವರನ್ನು ಇಳಿಸುತ್ತಾರೆ ಎಂದು ಲೇವಡಿ ಮಾಡಿದರು.