News Karnataka Kannada
Thursday, May 09 2024
ರಾಮನಗರ

ಮೇಕೆದಾಟು ಪಾದಯಾತ್ರೆಗೆ ಜಯ ಕರ್ನಾಟಕ ಸಂಘಟನೆ ಪಾಲ್ಗೊಳ್ಳಲಿದೆ: ಪ್ರಕಾಶ್ ರೈ

Prakash Rai
Photo Credit :

ರಾಮನಗರ: ಮೇಕೆದಾಟು ಅಣೆಕಟ್ಟೆ ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್  ಪಕ್ಷ  ಜ.9ರಿಂದ 19ರವರೆಗೆ ನಡೆಸಲಿರುವ ಮೇಕೆದಾಟು ಪಾದಯಾತ್ರೆಯನ್ನು ಬೆಂಬಲಿಸಿ ಜಯ ಕರ್ನಾಟಕ ಸಂಘಟನೆ ಪಾಲ್ಗೊಳ್ಳಲಿದೆ ಎಂದು ಸಂಘಟನೆ ರಾಜ್ಯ ವಕ್ತಾರ ಪ್ರಕಾಶ್ ರೈ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಕಾರ ಕೋರಿ ಮಾಡಿರುವ ಮನವಿಗೆ ಸ್ಪಂದಿಸಿ ಮೇಕೆದಾಟು ಪಾದಯಾತ್ರೆಗೆ ಸಂಘಟನೆ ಬೆಂಬಲ ನೀಡಿದೆ. ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ ಯಾವುದೇ ಪಕ್ಷ ಹೋರಾಟ ನಡೆಸಿದರೂ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿದ ಕಾನೂನು ಕ್ರಮಗಳನ್ನು ಮತ್ತು ನಿಯಮಾವಳಿಗಳನ್ನು ಪ್ರತಿಯೊಬ್ಬ ನಾಗರಿಕನೂ ಪಾಲಿಸುವುದು ಕಡ್ಡಾಯ. ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೋವಿಡ್ ನಿಯಮಾವಳಿಗಳ ಪ್ರಕಾರ ಭಾಗವಹಿಸಲು ನಿರ್ಧಾರ ಮಾಡಿದ್ದೇವೆ. ಹೀಗಾಗಿ ಸರ್ಕಾರ ಪಾದಯಾತ್ರೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಳೆದ 14 ವರ್ಷಗಳಿಂದ ಜಯಕರ್ನಾಟಕ ಸಂಘಟನೆ ನಾಡು, ನುಡಿ, ಜಲ ಭಾಷೆಪರವಾಗಿ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದಿದೆ. ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಎಲ್ಲಾ ರೈತ ಮತ್ತು ಕನ್ನಡಪರ ಸಂಘಟನೆಗಳು ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿಕೊಂಡು ಬಂದಿವೆ. ಅದರಲ್ಲೂ ವಿಶೇಷವಾಗಿ ಜಯಕರ್ನಾಟಕ ಸಂಘಟನೆ ಜಿಲ್ಲೆಗೆ ನೀರಾವರಿ ವಿಚಾರಕ್ಕೆ ಸಂಬಂಧಪಟ್ಟಂತೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸುತ್ತಲೇ ಬಂದಿದೆ ಎಂದರು.

ಅಲ್ಲದೇ ವೃಷಭಾವತಿ ನದಿ ನೀರು ಶುದ್ಧೀಕರಣ, ಬಿಡದಿ ಭಾಗಕ್ಕೆ ಕಾವೇರಿ ನೀರು ಪೂರೈಕೆ, ಅರ್ಕಾವತಿ ನದಿ ಶುದ್ಧೀಕರಣ ಮಂಚನಬೆಲೆ ಎಡದಂಡೆ ಬಲದಂಡೆ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯ ಹಾಗೂ ಮೇಕೆದಾಟು ಆಣೆಕಟ್ಟು ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ಯಾವುದೇ ರಾಜಕೀಯ ಪಕ್ಷಗಳು ಬೆಂಬಲಿಸದಿದ್ದರೂ ಕೂಡ ಜಯಕರ್ನಾಟಕ ಸಂಘಟನೆ ಹಾಗೂ ಜಿಲ್ಲೆಯ ಇತರ ಕನ್ನಡ, ರೈತಪರ ಸಂಘಟನೆಗಳು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್  ಈಗ ಪಾದಯಾತ್ರೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಈ ಯೋಜನೆಯನ್ನು ಜಾರಿಗೊಳಿಸಬೇಕು. ಕರ್ನಾಟಕದ ಜನರ ಪ್ರೀತಿ-ವಿಶ್ವಾಸಕ್ಕೆ ಒಳಗಾದ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕರ್ನಾಟಕದ ನೆಲಕ್ಕೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರಕಾಶ್ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕೆ.ರವಿ, ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎ.ಪಿ.ಕೃಷ್ಣಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಜಿ.ಕುಮಾರ್  , ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಪಿ.ವೀರೇಶ್, ಜಿಲ್ಲಾ ಪ್ರಧಾನ ಸಂಚಾಲಕ ಆನಂದ್, ರಾಮನಗರ ತಾಲೂಕು ಘಟಕದ ಅಧ್ಯಕ್ಷ ಆನಂದ್, ಕನಕಪುರ ತಾಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ, ಪದಾಧಿಕಾರಿಗಳಾದ ಶಿವರಾಜು, ಪ್ರಶಾಂತ್, ಮಧುಸೂದನ್, ರವಿ ಚನ್ನಪಟ್ಟಣ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು