ಮಾಗಡಿ,ಡಿ.22 : ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ಕೆರೆಗೆ ಹಾರಿದ್ದನ್ನು ಕಂಡ ಮಗಳು, ಅಳಿಯ ರಕ್ಷಿಸಲು ಹೋಗಿ ಅವರೂ ನೀರುಪಾಲಾಗಿರುವ ದಾರುಣ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿದ್ದಮ್ಮ(55), ಮಗಳು ಸುಮಿತ್ರಾ(30), ಅಳಿಯ ಹನುಮಂತರಾಜು(35) ಮೃತಪಟ್ಟ ದುರ್ದೈವಿಗಳು. ಸಿದ್ದಮ್ಮ ಹಾಗೂ ಬೈಲನರಸಯ್ಯ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ತಡರಾತ್ರಿ ಜಗಳ ನಡೆದಿದ್ದು, ಸಿದ್ದಮ್ಮ ಏಕಾಏಕಿ ಮನೆಯಿಂದ ಹೊರಟು ಕೆರೆ ಬಳಿ ಹೋಗಿದ್ದಾರೆ.
ಇದರಿಂದ ಗಾಬರಿಗೊಂಡ ಮಗಳು ಸುಮಿತ್ರಾ ಹಾಗೂ ಅಳಿಯ ಹನುಂತರಾಜು ಕೂಡ ಹಿಂಬಾಲಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಸಿದ್ದಮ್ಮ ಕೆರೆಗೆ ಹಾರಿ ಚೀರಾಡುತ್ತಿದುದ್ದನ್ನು ಕಂಡ ಮಗಳು ಸುಮಿತ್ರಾ ತಾಯಿ ರಕ್ಷಿಸಲು ಕೆರೆಗೆ ಹಾರಿದ್ದಾಳೆ. ಇದನ್ನು ನೋಡಿದ ಅಳಿಯ ಹನುಮಂತರಾಜು
ಕೂಡ ಕೆರೆಗೆ ಇಳಿದು ಅತ್ತೆ ಹಾಗೂ ಹೆಂಡತಿಯನ್ನು ರಕ್ಷಿಸಲು ಮುಂದಾದರೂ ಕೂಡ ಸಾಧ್ಯವಾಗದೆ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇತ್ತ ತಂದೆ-ತಾಯಿ ಮುಳುಗುತ್ತಿರುವುದನ್ನು ಕಂಡ ಸುಮಿತ್ರಾ ಮಗಳು ಕೀರ್ತನಾ ಸಹ ನೀರಿಗೆ ಇಳಿದಿದ್ದು, ಅಷ್ಟರಲ್ಲಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಕೀರ್ತನಾಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೂವರ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುದೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.