ರಾಮನಗರ: ಇಲ್ಲಿನ ಮಾಗಡಿ ರಸ್ತೆಯಲ್ಲಿ ರಸ್ತೆಯ ಜೋಡುಗಟ್ಟೆ ಗೇಟ್ ಬಳಿ ಭೀಕರ ಅಪಘಾತ ಉಂಟಾಗಿದೆ. ಇದರಿಂದಾಗಿ ಓರ್ವ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಕಾರಿನಲ್ಲಿದ್ದಂತ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬಿಎಂಸ್ ಕಾಲೇಜಿನ ವಿದ್ಯಾರ್ಥಿಗಳು ಸಾವನದುರ್ಗಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ, ವಾಪಾಸ್ ತೆರಳುತ್ತಿದ್ದಂತ ಸಂದರ್ಭದಲ್ಲಿ ಮಾಗಡಿ ತಾಲೂಕಿನ ಜೋಡುಗಟ್ಟೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದೆ.
ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದದ್ದರಿಂದ ಜಮ್ಮು ಮೂಲಕ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಕಾಂಕ್ಷ ( 26 ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದಂತ ಆಶೀಶ್ ರಾಜಾ, ದಿವ್ಯಾಂಶು, ಆಶುತೋಷ್, ದರ್ಶನ್, ಯಶೋವರ್ಧನ್ ಸಿಂಗ್ ಹಾಗೂ ಭವ್ಯಾ ಎಂಬುವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.