ಕನಕಪುರ : ತಾಲ್ಲೂಕಿನ ತೇರಿನದೊಡ್ಡಿಯಲ್ಲಿ ಯುವಕನನ್ನು ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಯು ಶನಿವಾರ ಪೊಲೀಸರು ಮುಂದೆ ಶರಣಾಗಿದ್ದಾನೆ.
ತಾಲ್ಲೂಕಿನ ಕಸಬಾ ಹೋಬಳಿ ತೇರಿನದೊಡ್ಡಿಯ ಶಿವಮಾದಶೆಟ್ಟಿ ಅವರ ಮಗ ಜಗದೀಶ್ (26) ಕೊಲೆಯಾದವರು. ಆತ ಅವಿವಾಹಿತನಾಗಿದ್ದ. ಅದೇ ಗ್ರಾಮದ ತಿರುಮಲಬೋವಿ ಅವರ ಮಗ ರಾಮು (35) ಕೊಲೆ ಮಾಡಿರುವ ಆರೋಪಿ. ಈತ ವಿವಾಹಿತನಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ಗ್ರಾಮದಲ್ಲಿ ನಡೆದ ಸಂಕ್ರಾಂತಿ ಹಬ್ಬದ ನಂತರ ಎಲ್ಲರೂ ಮನೆಗಳಿಗೆ ತೆರಳಿದ್ದರು. ರಾತ್ರಿ 8ಗಂಟೆಗೆ ಬಸ್ ನಿಲ್ದಾಣದ ಎದುರುಗಡೆ ಮೋರಿಯ ಕಟ್ಟೆ ಮೇಲೆ ಕುಳಿತಿದ್ದ ಜಗದೀಶ್ಗೆ ರಾಮು ಲಾಂಗಿನಿಂದ ಏಕಾಏಕಿ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗದೀಶ್ ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗಿದ್ದಾನೆ. ನಂತರ ರಾಮು ಲಾಂಗಿನ ಸಮೇತ ಪೊಲೀಸ್ ಠಾಣೆಗೆ ಬಂದು ತಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ. ಕೃಷ್ಣ, ಎಸ್.ಐ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.