ಬೆಂಗಳೂರು: ದೇಶದಲ್ಲಿ ಒಂದೇ ಗ್ಯಾರಂಟಿ ಅದು ಪ್ರಧಾನಿ ನರೇಂದ್ರ ಮೋದಿ. ಮೋದಿ ಗ್ಯಾರಂಟಿಗೆ ಮಾತ್ರ ಬೆಲೆ ಇದೆ. ಜನ ಮೋದಿಯನ್ನು ಮಾತ್ರ ನಂಬುತ್ತಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ನಗರದ ಚರ್ಚ್ ಸ್ಟ್ರೀಟ್ನಲ್ಲಿ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಭಾಗಿ ಆಗಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ದೇಶದ ರೈತರ ಹಿತ ಕಾಪಾಡುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಜೆಟ್ 27 ಸಾವಿರ ರೂ. ಕೋಟಿಯಾಗಿತ್ತು. 2014ರ ಬಳಿಕ ಈಗ ಒಂದು ಲಕ್ಷ ಕೋಟಿ ರೂ. ಆಗಿದೆ. ಎಂಎಸ್ಪಿಗೂ ಸಾವಿರಾರು ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.
ವಿಕಸಿತ ಭಾರತ ಸಂಕಲ್ಪ ಒಂದು ಉತ್ತಮ ಕಾರ್ಯಕ್ರಮ. ಅಮೃತ ಕಾಲದ ವೇಳೆಗೆ ದೇಶ ಹೇಗೆಲ್ಲ ಇರಬೇಕು ಎಂಬ ಬಗ್ಗೆ ನಿರ್ಣಯ ಮಾಡಲು ದೇಶವನ್ನು ಸುರಕ್ಷಿತವಾಗಿಡಲು ಪ್ರಧಾನಿ ಮೋದಿ ಕನಸು ಕಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗುತ್ತಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಏನು ಎಂದು ಪ್ರಶ್ನಿಸಿದರು.
ನನ್ನ ತೆರಿಗೆ, ನನ್ನ ಹಕ್ಕು ಕಾಂಗ್ರೆಸ್ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದ ಎಲ್ಲಾ ಜನರು ತೆರಿಗೆ ಕಟ್ಟುತ್ತಾರೆ. ದೇಶದ ತೆರಿಗೆ ಹಣ ದೇಶದ ಬೆಳವಣಿಗೆಗೆ ಬಳಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ನನ್ನದು, ನಿನ್ನದು ಅಂತಿಲ್ಲ. ಎಲ್ಲರಿಗೂ ಕೇಳುವ ಹಕ್ಕಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಮೋದಿ ಕಾ ಪರಿವಾರ್ ಅಭಿಯಾನ ನಡೆಯುತ್ತಿದೆ. ನಾನೂ ಕೂಡ ಮೋದಿ ಕಾ ಪರಿವಾರದವನಾಗಿದ್ದೇನೆ. ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ. ಕಾಂಗ್ರೆಸ್ ದೆಹಲಿಯಲ್ಲಿ ಭ್ರಷ್ಟಾಚಾರಿ ಆಮ್ ಆದ್ಮಿ ಪಕ್ಷದ ಜೊತೆ ಕೈ ಜೋಡಿಸಿದೆ. ಆಮ್ ಆದ್ಮಿ ಸಚಿವರು ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದಾರೆ. 2 ಜಿ ಸ್ಪೆಕ್ಟ್ರಂ ಭ್ರಷ್ಟಾಚಾರ ಮಾಡಿದ ರಾಜಾ, ಸನಾತನ ಧರ್ಮದ ಬಗ್ಗೆ ಮಾತಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.