ಬೆಂಗಳೂರು: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರ ಪರಿಶೀಲನೆ ಬಳಿಕ ಹುಸಿ ಮೇಲ್ ಎಂಬುದು ಪತ್ತೆಯಾಗಿದೆ.
ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತದೆ ಎಂದು Morgue999lol ಎಂಬ ಮೇಲ್ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟೆನಯೊಂದರ ಹೆಸರನ್ನು ಉಲ್ಲೇಖಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ಈ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮ್ಯೂಸಿಯಂಗೆ ಡಾಗ್ ಸ್ಕ್ವಾಡ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಹಿಂದೆಯಷ್ಟೇ ಬೆಂಗಳೂರು ಹಾಗೂ ಆನೇಕಲ್ ನ ಒಟ್ಟು 44 ಶಾಲೆಗಳಿಗೆ ಬಾಂಬ್ ಬೆದರಿಕೆಯ ಈ-ಮೇಲ್ ಬಂದಿತ್ತು. ಮೇಲ್ ನಲ್ಲಿ “ಶಾಲೆ ಮೈದಾನದಲ್ಲಿ ಸ್ಪೋಟಕಗಳಿವೆ. ನವೆಂಬರ್ 26 ರಂದು ತಾಜ್ ಸ್ಪೋಟಗೊಂಡಿದ್ದು ಗೊತ್ತಿದೆ. ನೀವೆಲ್ಲ ಅಲ್ಲಾಹುವಿನ ಶತ್ರುಗಳು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಸಾಯಿಸುತ್ತೇವೆ. ನಿಮಗೆ ನಮ್ಮ ಅಡಿಯಾಳಾಗುವ ಅವಕಾಶ ಇದೆ. ಅಥವಾ ಅಲ್ಲಾಹುವಿನ ಧರ್ಮವನ್ನು ಪಾಲಿಸಿ. ನಿಮ್ಮ ದೇವರ ಮೂರ್ತಿಗಳು, ಬುದ್ಧನ ಮೂರ್ತಿಗಳು ಸ್ಪೋಟಕಗಳಿಂದ ಉಡಾಯಿಸಲ್ಪಡುತ್ತದೆ.
ಅಲ್ಲಾಹುವಿನ ಧರ್ಮವನ್ನು ಭಾರತದ ಎಲ್ಲೆಡೆ ಹಬ್ಬಿಸುತ್ತೇವೆ. ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅಥವಾ ಇಸ್ಲಾಂ ಕತ್ತಿಯ ಎದುರು ಸಾಯಿರಿ. ನಂಬದವರನ್ನು ಸಿಕ್ಕಾಗ ಅವರ ತಲೆ ಕಡಿದುಬಿಡಿ, ಎಲ್ಲಾ ಬೆರಳುಗಳನ್ನು ತುಂಡು ಮಾಡಿ. ಅಲ್ಲಾಹು ಅಕ್ಬರ್ ” ಎಂದು ಭಯಾನಕ ಸಂದೇಶ ಕಳುಹಿಸಲಾಗಿತ್ತು.