ಬೆಂಗಳೂರು: ದೇಶದ ರೈಲ್ವೆ ಇಲಾಖೆಗೆ ವೇಗ ನೀಡಿ ಭಾರತದ ರೈಲುಗಳು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದ್ದ ಪ್ರಧಾನಿ ಮೋದಿ ಸರ್ಕಾರ, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ದೇಶದ ರೈಲ್ವೆ ನಿಲ್ದಾಣಗಳನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಮೊದಲ ಹಂತಕ್ಕೆ ಇಂದು ಪ್ರಧಾನಿಯಿಂದ ಚಾಲನೆ ದೊರೆಯಲಿದೆ. ಈ ಮೂಲಕ ರಾಜ್ಯದಿಂದ ಈ ಯೋಜನೆಗೆ ಆಯ್ಕೆಯಾದ 55 ನಿಲ್ದಾಣಗಳ ಪೈಕಿ, 13 ನಿಲ್ದಾಣಗಳು ಶಿಲಾನ್ಯಾಸಗೊಳಲಿವೆ.
ಅಮೃತ್ ಭಾರತ್ ರೈಲು ನಿಲ್ದಾಣ ಪುನಾಭಿವೃದ್ಧಿ ಯೊಜನೆಗೆ ಇಂದು ಚಾಲನೆ ಸಿಗಲಿದೆ. ದೇಶದ ಪ್ರಮುಖ ನಗರಗಳ ಸೇರಿ ಒಟ್ಟು 1,275 ರೈಲ್ವೆ ನಿಲ್ದಾಣಗಳನ್ನು ಉನ್ನತ ಮಟ್ಟಕ್ಕೇರಿಸಿ 24,470 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನಮ್ಮ ರಾಜ್ಯದ ಒಟ್ಟು 55 ನಿಲ್ದಾಣ ಈ ಯೋಜನೆಗೆ ಆಯ್ಕೆಯಾಗಿವೆ. ಮೊದಲ ಹಂತದಲ್ಲಿ ನೈಋತ್ಯ, ದಕ್ಷಿಣ, ದಕ್ಷಿಣ ಕೇಂದ್ರ ಮತ್ತು ಕೇಂದ್ರ ರೈಲು ವಿಭಾಗಗಳನ್ನು ಸೇರಿ ಒಟ್ಟು 13 ರೈಲ್ವೆ ನಿಲ್ದಾಣಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ 13 ರೈಲ್ವೆ ನಿಲ್ದಾಣಗಳನ್ನು ಸೇರಿ, ದೇಶಾದ್ಯಂತ ಅಮೃತ್ ಭಾರತ್ ನಿಲ್ದಾಣ ಯೋಜನೆ ಮೊದಲ ಹಂತದ 508 ರೈಲು ನಿಲ್ದಾಣಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಲಿದ್ದಾರೆ.