ಕಲಬುರಗಿ: ಕೆಇಎ ನಡೆಸುವ ಪರೀಕ್ಷೆಯಲ್ಲಿ ಪಿಎಸ್ಐ ನೇಮಕಾತಿ ಹಗರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಕರಾಮತ್ತು ಇದೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿರುವ ತ್ರಿಮೂರ್ತಿ ಹೇಳಿಕೆ ಆಧರಿಸಿ ರುದ್ರಗೌಡ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ತ್ರಿಮೂರ್ತಿ, ಸಹೋದರ ಅಂಬರೀಶ್, ರುದ್ರಗೌಡ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾರಿನಲ್ಲಿ ಕುಳಿತು ಬ್ಲೂಟೂತ್ ಮೂಲಕ ಆರೋಪಿಗಳು ಉತ್ತರ ಹೇಳುತ್ತಿದ್ದರು. ನಕಲು ಮಾಡಲು ಸಹಾಯ ಮಾಡಿದ ಆರೋಪದಡಿ ಐಪಿಸಿ ಸೆಕ್ಷನ್ 420, 120ಬಿ, ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಇಂದು ಮತ್ತು ನಾಳೆ ಕೆಇಎ ವಿವಿಧ ಇಲಾಖೆಗಳ ಪ್ರಥಮ ಮತ್ತು ದ್ವಿತಿಯ ದರ್ಜೆ ಸಹಾಯಕತ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇಂದು ರಾಜ್ಯಾದ್ಯಂತ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆದಿತ್ತು. ಎಲ್ಲವೂ ಸುಗಮವಾಗಿ ಸಾಗ್ತಿದೆ ಎನ್ನೋವಷ್ಟರಲ್ಲಿ ಪಿಎಸ್ಐ ಅಕ್ರಮದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮತ್ತೆ ನಕಲು ನಡೆದಿದೆ.
ಬ್ಲ್ಯೂಟೂತ್ ಡಿವೈಸ್ ಬಳಿಸಿ ಪರೀಕ್ಷೆ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ವಿವಿಧ ಕಡೆ ದಾಳಿ ನಡೆಸಿತ್ತು. ಪರಿಣಾಮ ಕಲಬುರಗಿ ನಗರದ ಎರಡೂ ಹಾಗೂ ಅಫಜಲಪುರದಲ್ಲಿ ಒಟ್ಟು ಆರು ಜನರನ್ನ ರೆಡ್ ಹ್ಯಾಂಡ್ ಹೆಡೆಮುರಿ ಕಟ್ಟಿದ್ದಾರೆ.