ಬೆಂಗಳೂರು: ಗದಗ ಹೋಟೆಲ್ ಉದ್ಯಮಿ, ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಡಾ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್) ಅವರಿಗೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನ ದೊರೆತಿದೆ.
ಸಾಹಿತ್ಯ, ಸಂಸ್ಕೃತಿಗೆ ನೀಡಿರುವ ವಿಶಿಷ್ಟ ಕೊಡುಗೆಯ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಅವರ ಮನಗೆದ್ದಿರುವ ಕಾವೆಂಶ್ರೀ ಅವರ ಬಗ್ಗೆ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿಯೂ ಈ ಹಿಂದೆ ಪ್ರಧಾನಿಯವರು ಪ್ರಸ್ತಾಪಿಸಿದ್ದರು.
‘ಮನ್ ಕೀ ಬಾತ್’ನಲ್ಲಿ ಪ್ರಧಾನಿಯವರು ಹೆಸರು ಪ್ರಸ್ತಾಪಿಸಿರುವ ಪ್ರಮುಖರಿಗೂ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಲಾಗಿದೆ.
ಈ ಬಾರಿ ದೇಶದ 1500 ರೈತ ದಂಪತಿಗೆ ಕೂಡ ಗಣರಾಜ್ಯೋತ್ಸವಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಅದರಂತೆ, ದೆಹಲಿಗೆ ತೆರಳಿರುವರನ್ನು ಅಲ್ಲಿನ ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರದೇಶಗಳಿಗೂ ಕರೆದೊಯ್ಯುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ. ದೆಹಲಿ ಪ್ರಯಾಣ, ವಾಸ್ತವ್ಯ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ಮಾಡಿದೆ.
ಲಾಲಿ ಹಾಡು ಹಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಮನ ಗೆದ್ದಿದ್ದ ಚಾಮರಾಜನಗರದ ಕವಿ ಮಂಜುನಾಥ್ ಅವರೂ ಗಣರಾಜ್ಯೋತ್ಸವ ಪರೇಡ್ನಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಪಡೆದಿದ್ದಾರೆ.