ಬೆಂಗಳೂರು, ಸೆಪ್ಟೆಂಬರ್ 05: ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಮಂಡ್ಯ ಜಿಲ್ಲೆಯ ಟಿ.ಕೆ.ಹಳ್ಳಿ ಘಟಕಕ್ಕೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆ ಸಮಾರಂಭದ ನಂತರ ಮಂಡ್ಯಕ್ಕೆ ತೆರಳಲಿದ್ದೇನೆ. ಬಿ ಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷರು, ಎಂಜಿನಿಯರ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳನ್ನು ಈಗಾಗಲೇ ಘಟಕಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆಯ ಅಧಿಕಾರಿಗಳು ಪಂಪಿಂಗ್ ಸ್ಟೇಷನ್ ನಿಂದ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ. ಸಂಜೆಯ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ. ತಾಂತ್ರಿಕ ತಂಡವು ಯಂತ್ರೋಪಕರಣಗಳನ್ನು ಪುನರಾರಂಭಿಸಲು ತುರ್ತು ಮೋಡ್ ನಲ್ಲಿ ಕೆಲಸ ಮಾಡುತ್ತಿದೆ. “ನಾನು ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡುತ್ತೇನೆ”ಎಂದರು.
ಬೆಂಗಳೂರು ನಗರದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳ 30 ಸ್ಥಳಗಳಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಬೊಮ್ಮಾಯಿ ಹೇಳಿದರು. ಪ್ರತಿ ತಂಡದಲ್ಲಿ 30 ಸದಸ್ಯರನ್ನು ಹೊಂದಿರುವ ಎರಡು ಎಸ್ ಡಿ ಆರ್ ಎಫ್ ತಂಡಗಳನ್ನು ಪೀಡಿತ ಸ್ಥಳಗಳಿಗೆ ಕಳುಹಿಸಲು ಸೂಚನೆಗಳನ್ನು ನೀಡಲಾಗುತ್ತದೆ. ರಸ್ತೆಗಳಿಂದ ನೀರನ್ನು ಹೊರಹಾಕಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಏನು ನಿರ್ಧರಿಸಲಾಗಿದೆಯೋ ಅದನ್ನು ಯೋಜನೆಯಂತೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಸಚಿವರಾದ ಆರ್.ಅಶೋಕ್, ಬಿ.ಎ. ಬಸವರಾಜ, ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.