ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಐದಾರು ಮಂದಿ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಪಾಳಯ ಸೇರುತ್ತಾರೆ ಎಂಬ ಮಾತುಗಳ ಮಧ್ಯೆ ಸಂತೋಷ್ ಹೇಳಿಕೆ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಂತೋಷ್ ಹೇಳಿದ್ದೇನು: ನನ್ನ ಸಂಪರ್ಕದಲ್ಲಿ 40 – 45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆ ಒಂದು ದಿನದ ಕೆಲಸ ಅಷ್ಟೆ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ’ ಎಂದು ಬಿಎಲ್ ಸಂತೋಷ್ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದಿಂದ ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ‘ಬಾಂಬೆ ಬಾಯ್ಸ್’ ಎಂದು ಕರೆಯಲಾಗುತ್ತಿರುವ, ಅಂದು ನಮ್ಮ ಜೊತೆ ಬಂದವರನ್ನು ನಾವೇ ಹಾಗೆಲ್ಲ ಹೇಳುವುದು ಬೇಡ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಹಾಗೆಂದು ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಅಷ್ಟಕ್ಕೂ ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ. ಹಾಗೆ ಹೋದರೂ ಚಿಂತೆಯಿಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು ಎಂದು ತಿಳಿಸಿದರು.
ಮಗಳಿಗೆ ಮದುವೆ ಆಗಿಲ್ಲ ಎಂದು ಹೊರಹಾಕುತ್ತೇವಾ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನನಗೆ ಅರಿವಿದೆ. ಪ್ರತಿಪಕ್ಷ ನಾಯಕನ ನೇಮಕ ಆಗಿಲ್ಲ ಅನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನು? ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಹಾಕಲು ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಹಾಕುತ್ತೀರಾ. ತಡವಾಗಿದೆ ಎಂಬುದು ಎಷ್ಟು ಸತ್ಯವೋ ನೇಮಕ ಆಗುವುದೂ ಅಷ್ಟೇ ಸತ್ಯ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಚರ್ಚೆ ಬಿಟ್ಟು ಸಂಘಟನೆಯಲ್ಲಿ ತೊಡಗಿ ಎಂದು ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.