ಬೆಂಗಳೂರು: ಧಾರವಾಡದ ಮನೋಹರ ಗ್ರಂಥಮಾಲಾದಿಂದ ಲೇಖಕ ಶಶಿ ತರೂರ್ ಅವರ ಇಂಗ್ಲಿಷ್ ಕೃತಿ ‘Why I am a Hindu’ ಕನ್ನಡ ಅವತರಣಿಕೆ ಲೇಖಕ ಪ್ರೊ ಕೆ.ಈ. ರಾಧಾಕೃಷ್ಣ ಅನುವಾದಿಸಿರುವ ‘ನಾನು ಯಾಕೆ ಹಿಂದೂ?’ ಕೃತಿಯ ಲೋಕಾರ್ಪಣಾ ಸಮಾರಂಭವು ಅಕ್ಟೋಬರ್ 06ರಂದು ಬೆಂಗಳೂರಿನ ರೋಟರಿ ಸಭಾಂಗಣದಲ್ಲಿ ನೆರವೇರಿತು.
ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, “ಧರ್ಮ ಎನ್ನುವುದು ಇಂದಿನ ದಿನಗಳಲ್ಲಿ ಕೋಮು ಗಲಭೆ ಸೃಷ್ಟಿಸುವ ವಿಚಾರವಾಗಿದೆ. ಸ್ವಾಮಿ ವಿವೇಕಾನಂದರ ಮಾತಿನಂತೆ, ‘ಎಲ್ಲ ಜೀವಿಗಳ ಒಳಗೆ ದೇವ ಇದ್ದಾನೆ’ ಎಂಬ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,’ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, “ನಾನು ಯಾಕೆ ಹಿಂದೂ?’ ಕೃತಿಯನ್ನು ಓದಿದ ನಂತರ ಹಿಂದೂ ಧರ್ಮದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಾಯವಾಯಿತು. ಈ ಕೃತಿಯಲ್ಲಿ ಹಿಂದೂ ಧರ್ಮದ ನ್ಯೂನ್ಯತೆಗಳ ಬಗ್ಗೆಯೂ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ,” ಎಂದರು.
ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, “ಲೇಖಕ ಶಶಿ ತರೂರ್ ಅವರು ಬರವಣಿಗೆಯಿಂದಲೇ ಸಾವಿರಾರು ಓದುಗರನ್ನು ಹೊಂದಿದ್ದಾರೆ. ಅವರ ಪುಸ್ತಕವನ್ನು ಪ್ರೊ ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ತಂದಿರುವುದು ಬಹಳ ಸಂತೋಷದ ವಿಚಾರ. ಎಲ್ಲರೂ ಪುಸ್ತಕವನ್ನು ಖರೀದಿಸಿ ಓದಬೇಕು” ಎಂದರು.
ಸಾಹಿತಿ ನಾಡೋಜ ಕಮಲಾ ಹಂಪನಾ ಮಾತಾನಾಡಿ, ಹಿಂದೂ ಧರ್ಮದ ಬಗೆಗಿನ ಎಲ್ಲ ಮಾಹಿತಿಗಳನ್ನು ಕೃತಿಯಲ್ಲಿ ತಿಳಿಸಲಾಗಿದೆ. ಈ ಕೃತಿಯನ್ನು ಕನ್ನಡ ಓದುಗರಿಗೆ ಪ್ರೊ ಕೆ.ಈ. ರಾಧಾಕೃಷ್ಣ ನೀಡಿರುವುದಕ್ಕೆ ಅಭಿನಂದಿಸಿದರು.
ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಸದರು ಮತ್ತು ಲೇಖಕ ಶಶಿ ತರೂರ್ ಮಾತನಾಡಿ, “ಹಿಂದೂ ಅಂದ್ರೆ ಏನೂ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನ್ನ ಬಾಲ್ಯದಿಂದಲೇ ಇತ್ತು. ಆದರೆ ಇಂದಿನ ವಿದ್ಯಮಾನಗಳಲ್ಲಿ ಹಿಂದೂ ಎಂಬುದು ಬೇರೆ ರೀತಿಯ ಆಯಾಮ ಪಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಹಿಂದೂ ಧರ್ಮದ ಆಳವಾದ ಅಧ್ಯಯನದಿಂದ ನನಗೆ ಈ ಕೃತಿಯನ್ನು ಹೊರತರಲು ಸಾಧ್ಯವಾಯಿತು. ಹಿಂದಿನ ಕಾಲದ ಅನೇಕ ವಿದ್ವಾಂಸರು ಹಿಂದೂ ಧರ್ಮದ ಬಗ್ಗೆ ನಮಗೆ ತಿಳಿಸಿ ಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ’ ಎಂದರು.
ಲೇಖಕ ಪ್ರೊ. ಕೆ.ಈ. ರಾಧಕೃಷ್ಣ ಮಾತನಾಡಿ, “ಶಶಿ ತರೂರ್ ಅವರು ಈ ಕೃತಿಯನ್ನು ಬಹಳ ವಿಮರ್ಶತ್ಮಕವಾಗಿ ತಿಳಿಸಿದ್ದಾರೆ. ಹಿಂದೂ ಧರ್ಮವನ್ನು ಹಿಂಪಡೆಯುವ ಬಗ್ಗೆ ಈ ಕೃತಿಯಲ್ಲಿ ಬಹಳ ವಿವರವಾಗಿ ತಿಳಿಸಲಾಗಿದೆ ಎಂದು ಕೃತಿಯ ಅನುವಾದದ ಅನುಭವಗಳನ್ನು ಹಂಚಿಕೊಂಡರು”.
ಕಾರ್ಯಕ್ರಮದಲ್ಲಿ ಸುಂದರಶಿವಾರಾಮ್, ಮುದ್ದು ಮೋಹನ್ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.