ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು ಅನೇಕ ಕಡೆ ಅವಘಡಗಳು ಸಂಭವಿಸಿವೆ. ರಸ್ತೆಗಳು ಕೆರೆಯಂತಾಗಿವೆ, ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಅಂಡರ್ ಪಾಸ್ಗಳಲ್ಲಿ ನೀರು ನಿಂತು ವಾಹನಗಳು ಮುಳುಗಿವೆ. ಇಂದು ಕೂಡ ಜಿಟಿ ಜಿಟ ಮಳೆ ಮುಂದುವರೆದಿದ್ದು ಇಡೀ ಬೆಂಗಳೂರು ಕೂಲ್ ಕೂಲ್ ಆಗಿದೆ.
ರಸ್ತೆಗಳು ಮುಳುಗಿ ಕೆರೆಯಂತಾಗಿವೆ. ವಾಹನ ಸವಾರರಿಗೆ ಬೆಂಗಳೂರಿನ ಅಂಡರ್ ಪಾಸ್ಗಳು ಮೃತ್ಯುಕೂಪದಂತಾಗಿವೆ. ನಿನ್ನೆ ರಾತ್ರಿ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ರಾಜಕಾಲುವೆ ನೀರು ನುಗ್ಗಿ 50 ಮೀಟರ್ ಉದ್ದದ ರಸ್ತೆ ಜಲಾವೃತಗೊಂಡಿತ್ತು. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಏರ್ಪೋರ್ಟ್ ರಸ್ತೆ, ಹೆಬ್ಬಾಳ ನೀರಿನಿಂದ ಜಲಾವೃತವಾದರೆ, ಶೇಷಾದ್ರಿಪುರಂ ಅಂಡರ್ ಪಾಸ್ ಜನರಿಗೆ ಓಡಾಡಲು ಆಗದ ರೀತಿ ನೀರಿನಿಂದ ಭರ್ತಿಯಾಗಿತ್ತು. ಮಾರತ್ತಹಳ್ಳಿ, AECS ಲೇಔಟ್ ರಸ್ತೆಯಲ್ಲಿ ಜಲಧಾರೆ ಧುಮ್ಮುಕ್ಕಿತು. ಜಲಯಮಯವಾದ ಔಟರ್ ರಿಂಗ್ ರೋಡ್, ದೇವರಬಿಸನಹಳ್ಳಿ, ನೈಸ್ ರೋಡ್ ಜಂಕ್ಷನ್ ನದಿಯಂತೆ ಆಗಿದ್ದವು. ಇನ್ನೂ ಕಟ್ಟಡಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.