ಬೆಂಗಳೂರು: ರಾಜ್ಯದಲ್ಲಿ ವನ್ಯಜೀವಿ ಪಳಯುಳಿಕೆ ಕುರಿತಂತೆ ದಿನಕ್ಕೊಂದು ವಿವಾದ ಸೃಷ್ಟಿಯಾಗುತ್ತಿದೆ. ಈ ನಡುವೆ ಧಾರ್ಮಿಕ ಕಾರ್ಯಗಳಿಗ ನವಿಲು ಗರಿ ಬಳಕೆ ಕುರಿತು ಕೆಲ ವಿವಾದ ಸೃಷ್ಟಿಯಾಗಿತ್ತು. ಈ ಸಂಶಯ ವಿವಾದ ಪರಿಹರಿಸುವ ಸಲುವಾಗಿ ಅರಣ್ಯ ಸಚಿವ ಮಹತ್ವದ ಹೇಳಿಕೆ ನೀಡಿದ್ದಾರೆ.
ದರ್ಗಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನವಿಲುಗರಿ ಬಳಕೆ ಕುರಿತಂತೆ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ. ಕಾಯ್ದೆ ಪ್ರಕಾರ ನವಿಲುಗರಿಗಳ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ನವಿಲುಗರಿ ಮತ್ತು ಅದರಿಂದ ತಯಾರಿಸಿ ಯಾವುದೇ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ನವಿಲುಗಳಿಂದ ನೈಸರ್ಗಿಕವಾಗಿ ಬಿದ್ದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನು ಬಾಹಿರವಲ್ಲ ಎಂದು ಹೇಳಿದ್ದಾರೆ. ಆದರೆ ಹಿಂಸಾತ್ಮಕವಾಗಿ ನವಿಲುಗಳಿಂದ ಗರಿ ಕೀಳುವುದು ಅಪರಾಧ ಎಂದಿದ್ದಾರೆ.