ಬೆಂಗಳೂರು: ‘ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ರೋಗಿಯ ರೋಗವನ್ನು ಪರಿಹರಿಸುವಾತ. ಮುಚ್ಚುಮರೆ ಮಾಡದೇ ರೋಗಿಯು ತನ್ನ ಅಂತರಂಗವನ್ನು ಬಿಚ್ಚಿಡುವುದು ಕೇವಲ ವೈದ್ಯನ ಮುಂದೊಂದೇ. ಹೀಗಾಗಿ ಆತನು ಕೇವಲ ರೋಗ ಪರಿಹಾರಕನಾಗಿರದೇ ರೋಗಿಯ ಸಹಚಿಂತಕನೂ ಆಗಿರುತ್ತಾನೆಂದು ಹೇಳಬಹುದು.
ಆದರೆ ಇಲ್ಲೊಂದು ಪ್ರಕರಣ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಅವಧಿ ಮೀರಿದ ಚುಚ್ಚುಮದ್ದು ನೀಡಿದ ಆರೋಪದ ಮೇಲೆ ಪೊಲೀಸರು ಖಾಸಗಿ ಆಸ್ಪತ್ರೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಂಜೀವಿನಿ ಆಸ್ಪತ್ರೆ ವಿರುದ್ಧ ಮಹಾಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ. ಈ ಸಂಬಂಧ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಯಾದ್ವಿಯನ್ನು ಅಕ್ಟೋಬರ್ 29 ರಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಗ್ಲೂಕೋಸ್ ಡ್ರಿಪ್ ಮೂಲಕ ಚುಚ್ಚುಮದ್ದನ್ನು ನೀಡಿದ ತಕ್ಷಣ, ಮಗುವಿನ ತುಟಿಗಳು ಊದಿಕೊಂಡವು ಮತ್ತು ರಕ್ತಸ್ರಾವ ಪ್ರಾರಂಭವಾಯಿತು. ನಂತರ ಮಗುವಿನ ಪೋಷಕರಿಗೆ ನೀಡಿದ ಚುಚ್ಚುಮದ್ದಿನ ಅವಧಿ ಮುಗಿದಿದೆ ಎಂದು ತಿಳಿದು ಬಂದಿದೆ. ಪೋಷಕರು ಮಗುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಈ ಸಂಬಂಧ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.