ಬೆಂಗಳೂರು: ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಕೃಷಿ ಇಲಾಖೆ, ಕರ್ನಾಟಕ ಸರ್ಕಾರದವರು ಜಂಟಿಯಾಗಿ ಆಯೋಜಿಸುತ್ತಿರುವ “ರೈತರ ಕೃಷಿ ಕ್ಷೇತ್ರ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿನೂತನ ರಾಜ್ಯ ಮಟ್ಟದ ಆನ್ಲೈನ್ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆ ಕುರಿತು ಡಾ.ಬಿ.ಜಹೀರ್ ಅಹಮ್ಮದ್, ಸಸ್ಯ ರೋಗ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಗುಲ್ಬರ್ಗಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತೊಗರಿ ಬೆಳೆಗಾರರು ಬೇಸಿಗೆಯಲ್ಲಿ ಆಳವಾದ ಉಳುಮೆ, ಮಣ್ಣು ಪರೀಕ್ಷೆ ಆಧಾರದ ಮೇಲೆ ಸೂಕ್ತ ಪೋಷಕಾಂಶ ಒದಗಿಸುವುದು, ಬೆಳೆ ಪರಿವರ್ತನೆ, ಟ್ರೈಕೋಡರ್ಮಾಮಿಶ್ರಿತ ಬೇವಿನ ಹಿಂಡಿ, ಎರೆಹುಳುಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಬಳಸುವುದು, ಶಿಫಾರಸ್ಸಿನ ತಳಿಗಳನ್ನು ಬಳಸುವುದು, ಹೊಲಗಳಲ್ಲಿ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸುವುದು, ಟ್ರೈಕೋಡರ್ಮಾಜೈವಿಕ ಶೀಲಿಂದ್ರ ನಾಶಕದಿಂದ ಬೀಜೋಪಚಾರ, ಸೊರಗು ರೋಗ ಕಂಡು ಬಂದಲ್ಲಿ ಆರಂಭಿಕ ಹಂತದಲ್ಲಿ 5 ಗ್ರಾಂಟ್ರೈಕೋಡರ್ಮಾ ಅಥವಾ ಕಾರ್ಬನ್ಡೈಜಿಂ ಮತ್ತು ಮ್ಯಾಂಕೋಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ನೆನೆಯುವಂತೆ ಸಿಂಪಡಿಸುವ ಮೂಲಕ ತೊಗರಿಯಲ್ಲಿ ಸೊರಗು ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಆನ್ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು, ಡಾ.ಕೆ.ಶಿವರಾಮು,ಸಂಯೋಜಕರು ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಎಂ.ಗೋಪಾಲ್ ಸಂಯೋಜಕರು ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಎನ್. ಬಸವರಾಜು, ರಾಜ್ಯ ಸಂಯೋಜಕರು (ಆತ್ಮ), ಬೆಂಗಳೂರು ಇವರು ಭಾಗವಹಿಸಿದ್ದರು.