ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಏಪ್ರಿಲ್ 27ಕ್ಕೆ ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ದೇಶ ಬಿಟ್ಟು ಹೋಗಿದ್ದಾರೆ. ಅವರು ಬೇರೆ ದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರೋಪಿಯನ್ನ ಸುರಕ್ಷಿತವಾಗಿ ಇರಿಸಬೇಕಲ್ಲವಾ? ಅದಕ್ಕಾಗಿ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಪತ್ರ ಬರೆದಿದ್ದೇನೆ. ನನ್ನ ಮೊದಲ ಪತ್ರಕ್ಕೆ ಉತ್ತರ ಬಾರದ ಕಾರಣ ಎರಡನೇ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.
ಪ್ರಜ್ವಲ್ ಮೇಲೆ ಐಪಿಸಿ ಸೆಕ್ಷನ್ 377ರ ಅಡಿ ಕೇಸ್ ದಾಖಲಾಗಿದ್ದು ಮೂರು ದೂರು ಬಂದಿವೆ. ಆರೆಸ್ಟ್ ಆಗಿಬಿಡುತ್ತೇನೆ ಎಂದು ವಿದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಮೊದಲ ಪತ್ರಕ್ಕೆ ಕೇಂದ್ರದಿಂದ ಇವತ್ತಿನವರೆಗೂ ಉತ್ತರ ಬಂದಿಲ್ಲ. ವಿಶೇಷ ತನಿಖಾ ತಂಡ ಕೋರ್ಟ್ನಿಂದ ವಾರೆಂಟ್ ತಗೊಂಡಿದ್ದಾರೆ. ಆ ವಾರೆಂಟ್ ಮಾಹಿತಿಯನ್ನೂ ಕೇಂದ್ರಕ್ಕೆ ಕಳುಹಿಸಿಕೊಟ್ಟು ಅವರು ಒಂದು ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದಕ್ಕೂ ಉತ್ತರ ಬಂದಿಲ್ಲ ಎಂದು ತಿಳಿಸಿದರು.