ಬೆಂಗಳೂರು: ಬೆಂಗಳೂರಿನ ಕೋರ್ಟ್ ಕಸ್ಟಡಿಯಲ್ಲಿದ್ದ ದಿ.ಜಯಲಲಿತಾರ ಆಭರಣಗಳು ತಮಿಳುನಾಡಿಗೆ ಮರಳಲು ಮುಹೂರ್ತ ನಿಗದಿಯಾಗಿದೆ. ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್ ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ರು. ವಿಚಾರಣೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಜಯಲಲಿತಾರಿಂದ ವಶಕ್ಕೆ ಪಡೆದಿದ್ದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ಸುಪರ್ದಿಯಲ್ಲೇ ಇದ್ದವು. ಇದೀಗ ಈ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾಗಿದ್ದ ಜಯಲಲಿತಾರ ಒಡವೆ ಹಿಂತಿರುಗಿಸಲು ದಿನಾಂಕ ನಿಗದಿಪಡಿಸಿರುವ ಕೋರ್ಟ್ ಮಾರ್ಚ್ 6 ಮತ್ತು 7 ರಂದು ತಮಿಳುನಾಡು ಸರ್ಕಾರಕ್ಕೆ ಒಡವೆ ಹಸ್ತಾಂತರ ಮಾಡಲು ತೀರ್ಮಾನಿಸಿದೆ. ಒಡವೆ ಸ್ವೀಕರಿಸಲು ತಮಿಳುನಾಡು ಸರ್ಕಾರದಿಂದ ಇಬ್ಬರು ಅಧಿಕಾರಿಗಳ ನೇಮಕವಾಗಿದೆ.
ಒಡವೆ ಮತ್ತಿತರ ಜಯಲಲಿತಾರ ವಸ್ತುಗಳನ್ನು ಒಯ್ಯಲು 6 ಟ್ರಂಕ್ ಗಳನ್ನು ತರಬೇಕು ವಿಡಿಯೋಗ್ರಾಫರ್, ಫೋಟೋಗ್ರಾಫರ್ ಕರೆತರಲು ಸೂಚನೆ ನೀಡಿದೆ. ಒಡವೆ ಹಸ್ತಾಂತರದ ಎರಡೂ ದಿನಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಿದೆ.
7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್ಗಳನ್ನು ತೆಗೆದುಕೊಂಡು ಹೋಗಲು 6 ಟ್ರಂಕ್ಗಳು ತಮಿಳುನಾಡಿನಿಂದ ಬೆಂಗಳೂರಿಗೆ ಬರಲಿವೆ.