ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಮನೆಗಳಲ್ಲಿ ಪ್ರತಿ ಫಲಾನುಭವಿಗಳಿಂದ 1 ಲಕ್ಷ ರೂ. ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತೀರ್ಮಾನಿಸಿದೆ.
ಡಿಸೆಂಬರ್ 21 ನಡೆದ ಮಹತ್ವದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಿ ಮನೆಯನ್ನು ಪಡೆಯಬಹುದು.
ಇದು ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸದೇ ಇರುವ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದು ಎಂದು ಹೇಳಿದರು.
ಹೊಸ ಯೋಜನೆಯ ಪ್ರಕಾರ ರಾಜ್ಯ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿದೆ. ಈಗ ಮನೆ ಪಡೆಯುವ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಕಟ್ಟಿದರೆ ಸಾಕು. ಕೇಂದ್ರ ಸರ್ಕಾರ ಒಂದುವರೆ ಲಕ್ಷವನ್ನು ಕೊಡುತ್ತದೆಯಾದರೂ ಈ ಮೊತ್ತವನ್ನು ಅದು ಜಿಎಸ್ಟಿ ಮೂಲಕ ಮರಳಿ ಪಡೆಯುತ್ತದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2015ರಲ್ಲಿ 1,80,253 ಮನೆಗಳು ಮಂಜೂರಾಗಿದ್ದವು. ಆದರೆ, 2015ರಿಂದ 2023ರ ವರೆಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಒಂದೇ ಒಂದು ಮನೆಯನ್ನು ಕೊಡಲು ಸಾಧ್ಯವಾಗಿಲ್ಲ. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ವರ್ಷವೂ ಒಂದಷ್ಟು ಮನೆಗಳಿಗೆ ಮಂಜೂರಾತಿ ನೀಡಲಾಗಿತ್ತು. 2018ರಿಂದ ಒಂದೇ ಒಂದು ಮನೆಯನ್ನು ಮಂಜೂರಾತಿ ನೀಡಲಾಗಿಲ್ಲ.
ಆವಾಸ್ ಯೋಜನೆಯ ಪ್ರಕಾರ ಫಲಾನುಭವಿಗಳು 4.5 ಲಕ್ಷ ರೂ. ಪಾವತಿಸಬೇಕು. ಕೇಂದ್ರ ಸರಕಾರ 1.5 ಲಕ್ಷ ರೂ. ನೀಡುತ್ತದೆ, ರಾಜ್ಯ ಸರಕಾರ ಒಂದು ಲಕ್ಷ ರೂ. ನೀಡಬೇಕು. ಆದರೆ, ರಾಜ್ಯ ಸರ್ಕಾರ ಇದುವರೆಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡಿಲ್ಲ. ಜತೆಗೆ ಹಲವಾರು ಫಲಾನುಭವಿಗಳು 4.5 ಲಕ್ಷ ರೂ. ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.