ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಜುಲೈ 19ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಜುಲೈ 19ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಜೆ 5.30ಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.
ಇನ್ನು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಗೃಹಲಕ್ಷ್ಮಿ ಯೋಜನೆಯ ದಿನಾಂಕ ಘೋಷಣೆಯಾಗುವ ಎರಡು ವಾರಗಳ ಮುಂಚೆಯೇ ಸಾಕಷ್ಟು ಮಹಿಳೆಯರು ಮನೆ ಸಮೀಪದ ಕಂಪ್ಯೂಟರ್ ಸೆಂಟರ್ಗಳಲ್ಲಿ ದಾಖಲಾತಿ ನೀಡಿ ಅರ್ಜಿ ಸಲ್ಲಿಕೆಗೆ ನೂರಾರು ರೂ. ಫೀಸ್ ಕೂಡಾ ಕಟ್ಟಿದ್ದಾರೆ. ಆದರೆ, ಖಾಸಗಿ ಕಂಪ್ಯೂಟರ್ ಸೆಂಟರ್ಗೂ ಈ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೂ ಸಂಬಂಧ ಇಲ್ಲ.
ಕಡ್ಡಾಯವಾಗಿ ಬಾಪೂಜಿ ಸೇವಾಕೇಂದ್ರ, ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಜಿಲ್ಲಾ ಒನ್ ಕೇಂದ್ರಗಳಿಗೆ ತೆರಳಬೇಕು. ಅಥವಾ ಪ್ರಜಾ ಪ್ರತಿನಿಧಿಗಳ ಬಳಿ ಅರ್ಜಿ ಸಲ್ಲಿಸಬಹುದು. ಹೀಗಾಗಿ, ಮಹಿಳೆಯರು ಖಾಸಗಿ ಕಂಪ್ಯೂಟರ್ ಸೆಂಟರ್ಗೆ ತೆರಳಬಾರದು, ನೂರಾರು ರೂಪಾಯಿ ಶುಲ್ಕ ಪಾವತಿಸಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು?
ಪಡಿತರ ಚೀಟಿ ಸಂಖ್ಯೆ
ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಪಾಸ್ಬುಕ್ ಮಾಹಿತಿ ನೀಡಬೇಕು.
ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಬೇರೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಬೇಕಾಗಿದ್ದಲ್ಲಿಆ ಬ್ಯಾಂಕ್ ಖಾತೆಯ ಪಾಸ್ಬುಕ್ ನೀಡಬೇಕು.
ಫಲಾನುಭವಿ ಹೆಸರಿನಲ್ಲಿಯೇ ಬ್ಯಾಂಕ್ ಖಾತೆ ಇರಬೇಕಾದದ್ದು ಅಗತ್ಯ. ಬ್ಯಾಂಕ್ ಖಾತೆ ಇಲ್ಲದಿದ್ದಲ್ಲಿ ಖಾತೆ ತೆರೆದ ಬಳಿಕ ನೋಂದಣಿ ಮಾಡಿಸಿಕೊಳ್ಳಬಹುದು.