ಚಿತ್ರದುರ್ಗ: ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಭಗ್ವದ್ಧ್ವಜ ಹಾರಿಸಿದ್ದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಅದೇ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇತ್ತ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ತಾರಕಕ್ಕೇರಿದ್ದು, ಬ್ಯಾರಿಕೆಡ್ ಗಳನ್ನು ತೆಗೆಯಲು ಮುಂದಾದ ಯುವಕರ ಮೇಲೆ ಪೊಲೀಸರು ಮತ್ತೆ ಲಾಠಿ ಚಾರ್ಜ್ ಮಾಡಿದ್ದಾರೆ.
ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಬೆನ್ನಲ್ಲೇ ನಿಷೇಧಾಜ್ಞೆ ಉಲ್ಲಂಘಿಸಿ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರ ಸಮ್ಮುಖದಲ್ಲಿ ಮಹಿಳೆಯರು ಏಣಿ ಮೂಲಕ ಧ್ವಜಸ್ತಂಭ ಹತ್ತಿ ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜನವನ್ನು ಕಟ್ಟಿ ಜೈ ಶ್ರೀರಾಮ್, ಹಿಂದೂ ಧರ್ಮಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದ್ದರು.
ಧ್ವಜಸ್ತಂಭದಲ್ಲಿ ಕಟ್ಟಿದ್ದ ಫ್ಲೆಕ್ಸ್ ಹಾಗೂ ದ್ವಜವನ್ನು ತೆರವುಗೊಳಿಸಲು ಮುಂದಾದ ಪೊಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೊಂದೆಡೆ ಧ್ವಜಸ್ತಂಭದ ಬಳಿ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತೆಗೆಯಲು ಯುವಕರು ಮುಂದಾಗಿದ್ದರೆ. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಯುವಕರನ್ನು ಚದುರಿಸಲು ಪೊಲೀಸರು ಮತ್ತೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.