ರಾಯಚೂರು: ‘ಮೌಢ್ಯತೆಯನ್ನು ಆಚರಣೆಗಳನ್ನು ವಿರೋಧಿಸಿದ್ದ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಶರಣರು ತಮ್ಮ ಪ್ರತಿಷ್ಠೆಗಾಗಿ ಇಡೀ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ’ ಎಂದು ರಾಯಚೂರು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಧರ್ಮ ಸ್ಥಾಪನೆ ಬೇಡಿಕೆಗೆ ನೇತೃತ್ವದ ವಹಿಸಿದ್ದ ಮುರುಘಾ ಶರಣರು ‘ವೀರಶೈವ ಲಿಂಗಾಯತ’ ವೆಬ್ಸೈಟ್ ಪ್ರಾರಂಭಿಸುವ ಮೂಲಕ ಗೊಂದಲವನ್ನು ಹುಟ್ಟುಹಾಕಿದ್ದಾರೆ. ವೀರಶೈವ, ಲಿಂಗಾಯತರು ಒಂದೇ ಆಗಿದ್ದರೆ ಧರ್ಮಗುರುಗಳು ಮತ್ತು ಧರ್ಮಗ್ರಂಥ ಒಂದೇ ಆಗಿರಬೇಕಾಗುತ್ತದೆ’ ಎಂದರು.‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕೊನೆಯಾಗಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರಿದಿದೆ. ಲಿಂಗಾಯತ ಧರ್ಮೀಯರನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗುವವರು, ತಾತ್ವಿಕ ಚಿಂತನೆಗಳಿಂದ ದೂರಹೋದಂತೆ. ಮುರುಘಾ ಶರಣರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಮುಂದಾಳತ್ವ ವಹಿಸಿ ವೀರಶೈವ ಎನ್ನುವುದು ಒಂದು ಪಂಗಡ ಎಂದು ಹೇಳಿ, ಅದರಲ್ಲಿಯ ವೈದಿಕ ಮೌಡ್ಯಾಚರಣೆಗಳನ್ನು ಖಂಡಿಸುತ್ತ ಬಂದಿದ್ದಾರೆ. ಆದರೆ ವೆಬ್ಸೈಟ್ ಆರಂಭಿಸಿರುವುದು ಗೊಂದಲ ಮೂಡಿಸಿದೆ’ ಎಂದು ತಿಳಿಸಿದರು.