ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎನ್ಎಚ್ ಶಿವಶಂಕರ ರೆಡ್ಡಿ ಸಿಎಂ ವಿರುದ್ಧ ಗರಂ ಆಗಿದ್ದು, ಹಳೆಯ ಸಿದ್ದರಾಮಯ್ಯನವರೇ ಬೇರೆ ಹೊಸ ಸಿದ್ದರಾಮಯ್ಯನವರೇ ಬೇರೆ ಎಂದು ಮುನಿಸಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉದ್ಯಮಿ ಕೆಎಚ್ ಪುಟ್ಟಸ್ವಾಮಿಗೌಡ ವಿರುದ್ದ ಸೋಲನುಭವಿಸಿದ್ದರು.ಈ ಸೋಲಿನ ನಂತರ ಪಕ್ಷದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಶಿವಶಂಕರ ರೆಡ್ಡಿಯವರನ್ನು ಯಾರು ಪರಿಗಣಿಸುತ್ತಿಲ್ಲ. ಬದಲಿಗೆ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡಗೆ ಮಾನ್ಯತೆ ನೀಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
ಇದೀಗ ಶಿವಶಂಕರ ರೆಡ್ಡಿ ಮುಂಬರುವ ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೂ ಪಕ್ಷದ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಇದರಿಂದ ಹಳೆ ಸಿದ್ದರಾಮಯ್ಯನವರೇ ಬೇರೆ ಹೊಸ ಸಿದ್ದರಾಮಯ್ಯನವರೇ ಬೇರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಬಿಜೆಪಿ ನಾಯಕರು ಶಿವಶಂಕರ ರೆಡ್ಡಿಗೆ ಗಾಳ ಹಾಕಿರುವ ಬಗ್ಗೆ ವದಂತಿ ಹಬ್ಬಿದೆ. ಆದರೆ ಬಿಜೆಪಿ ಸೇರುವ ಬಗ್ಗೆ ಶಿವಶಂಕರ ರೆಡ್ಡಿ ಇನ್ನೂ ಏನೂ ಹೇಳಿಕೆ ನೀಡಿಲ್ಲ.